ಅಪಘಾತಕ್ಕೀಡಾದ ಕಾರಿನಲ್ಲಿ ಕದ್ದ ಮಾಲು ಪತ್ತೆಯಾದ ಪ್ರಕರಣ: ಸೂತ್ರಧಾರನೆಂದು ಶಂಕಿಸಲಾಗುತ್ತಿರುವ ಯಾಸಿನ್ ಖಾನ್ 80ಕ್ಕೂ
ಹೆಚ್ಚು ಪ್ರಕರಣಗಳ ಕುಖ್ಯಾತ ಅಂತಾರಾಜ್ಯ ಕಳವು ಆರೋಪಿ
ಮುಳ್ಳೇರಿಯ: ಮುಳ್ಳೇರಿಯದಲ್ಲಿ ಎಪ್ರಿಲ್ 6ರಂದು ಮುಂಜಾನೆ ಅಪಘಾತಕ್ಕೀಡಾದ ಕಾರಿನಲ್ಲಿ ಚಿನ್ನ, ಬೆಳ್ಳಿ, ನಗದು ಹಾಗೂ ಮಾರಕಾಯು ಧಗಳು ಪತ್ತೆಯಾದ ಪ್ರಕರಣದ ತನಿಖೆಯನ್ನು ಆದೂರು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಈ ಕಳವು ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಅದರ ಸೂತ್ರಧಾರ ಎಂದು ಪೊಲೀ ಸರು ಶಂಕಿಸುತ್ತಿರುವ ಯಾಸಿನ್ಖಾನ್ (35) ಕುಖ್ಯಾತ ಅಂತಾರಾಜ್ಯ ಕಳವು ಆರೋಪಿಯಾಗಿದ್ದಾನೆ. ಮೂಲತಃ ಮೈಸೂರು ರಾಜೀವ್ನಗರ ನಿವಾಸಿಯಾಗಿರುವ ಆತ ಈಗ ಬೆಂಗಳೂರಿನ ಕೆ.ಜೆ.ಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ. ಚೋರ್ ಇಮ್ರಾನ್ ಮತ್ತು ಇಮ್ಮು ಇತ್ಯಾದಿ ಹಲವು ಅಡ್ಡ ಹೆಸರುಗಳನ್ನು ಈತ ಹೊಂದಿದ್ದಾನೆ. ಬೆಂಗಳೂರಿನಲ್ಲಿ ಮಾತ್ರವಾಗಿ ಈತನ ವಿರುದ್ಧ ೨೬ ಕಳವು ಪ್ರಕರಣಗಳಿವೆ. ಮುಂಬೈ, ಗೋವಾ, ಹೈದರಾಬಾದ್, ಸೋಲಾಪುರ್, ಬೆಂಗಳೂರು ಸೇರಿದಂತೆ ವಿವಿಧೆಡೆ ಈತನ ವಿರುದ್ಧ ಒಟ್ಟಾರೆಯಾಗಿ ೮೦ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲುಗೊಂಡಿದೆ. ಆ ಪೈಕಿ ಆರು ಪ್ರಕರಣಗಳಲ್ಲಿ ಆತನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಕರ್ನಾಟಕ ಪೊಲೀಸರ ಹಿಟ್ ಲಿಸ್ಟ್ನಲ್ಲಿ ಒಳಗೊಂಡಿರುವ ವ್ಯಕ್ತಿಯೂ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಬೆಂಗಳೂರಿನ ಜಯಪ್ರಕಾಶ್ನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮನೆಯೊಂದರ ಬೀಗ ಮುರಿದು ಒಳನುಗ್ಗಿ ಒಂದು ಲಕ್ಷರೂ. ನಗದು, ಚಿನ್ನ, ಬೆಳ್ಳಿಯಒಡವೆ ಇತ್ಯಾದಿ ಸಾಮಗ್ರಿಗಳ ಕಳವು ನಡೆದಿತ್ತು. ಮುಳ್ಳೇರಿಯ ಬಳಿ ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಮಾಲುಗಳು ಅವುಗಳಾಗಿವೆಯೇ ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಪರಿಶೀಲಿಸಿದಾಗ ಆದೂರು ಪೊಲೀಸ್ ಠಾಣೆಗೆ ಆಗಮಿಸುವ ಸಾಧ್ಯತೆ ಇದೆ. ಮುಳ್ಳೇರಿಯದಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿ 1,01,700 ರೂ. ನಗದು, 140 ಗ್ರಾಂ ಚಿನ್ನ, 339 ಗ್ರಾಂ ಬೆಳ್ಳಿ ಒಡವೆ ಮತ್ತು ಎರಡು ಸುತ್ತಿಗೆ, ಒಡೆದ ಬೀಗಗಳು ಪತ್ತೆಯಾಗಿತ್ತು. ಆ ವೇಳೆ ಆ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದರು. ಆ ಕಾರಿನಲ್ಲಿ ನಾಲ್ಕು ಎಟಿಎಂ ಕಾರ್ಡ್ಗಳು ಪತ್ತೆ ಯಾಗಿತ್ತು. ಅದರಲ್ಲಿ ಒಂದು ಯಾಸಿನ್ ಖಾನ್ನದ್ದಾಗಿತ್ತು. ಅದರಿಂದಾಗಿ ಈ ಕಳವು ಪ್ರಕರಣದ ಸೂತ್ರಧಾರ ಆತನೇ ಆಗಿರಬಹುದು ಎಂಬ ಶಂಕೆ ಪೊಲೀಸರನ್ನು ಕಾಡತೊಡಗಿದೆ. ಕಾರಿನಿಂದ ಪತ್ತೆಯಾದ ನಾಲ್ಕು ಎಟಿಎಂ ಕಾರ್ಡ್ನಲ್ಲಿ ಒಂದು ಯುವತಿ ಯೋರ್ವೆಯದ್ದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಎ. ೯ರಂದು ಮುಂಜಾನೆ ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ತಪಾಸಣೆಗಾಗಿ ನಿಲ್ಲಿಸಲು ತಿಳಿಸಿದಾಗ ಕಾರು ನಿಲ್ಲದೆ ಮುಂದಕ್ಕೆ ಸಾಗಿತ್ತು. ಅಬಕಾರಿ ತಂಡ ತಕ್ಷಣ ಅದನ್ನು ಹಿಂಬಾಲಿಸಿದಾಗ ಆ ಕಾರು ಮುಳರಿಯ-ಬದಿಯಡ್ಕ ರಸ್ತೆಯ ಕಾಂಕ್ರೀಟ್ ಗೋಡೆಗೆ ಢಿಕ್ಕಿ ಹೊಡೆದಿತ್ತು. ಆಗ ಅದರಲ್ಲಿದ್ದ ಇಬ್ಬರು ತಪ್ಪಿಸಿ ಪರಾರಿಯಾಗಿದ್ದರು. ಆ ಕಾರನ್ನು ಅಬಕಾರಿ ತಂಡ ಪರಿಶೀಲಿಸಿದಾಗ ಅದರಲ್ಲಿ ನಗ-ನಗದು ಇತ್ಯಾದಿ ಪತ್ತೆಯಾಗಿತ್ತು. ನಂತರ ಅದನ್ನು ಅಬಕಾರಿ ತಂಡ ಆದೂರು ಪೊಲೀಸರಿಗೆ ಹಸ್ತಾಂತರಿಸಿತ್ತು.