ಐತಿಹಾಸಿಕ ಮೂಡಪ್ಪ ಸೇವೆಯಿಂದ ಭಕ್ತಸಾಗರ ಪುನೀತ

ಮಧೂರು: ಹಲವು ವರ್ಷಗಳ ಕಾಯುವಿಕೆಯನ್ನು ಸಾರ್ಥಕಗೊಳಿಸಿ ಮಧೂರು ಬೊಡ್ಡಜ್ಜನಿಗೆ ನಡೆದ ಮೂಡಪ್ಪ ಸೇವೆ ಪುನೀತವಾಯಿತು. ಈ ಪುಣ್ಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಮಂದಿ ನಿನ್ನೆ ಮಧೂರಿಗೆ ತಲುಪಿದ್ದು, ಮಳೆ ನೀರಿನಂತೆ ಜನಸಾಗರ ಕಂಡು ಬಂದಿದೆ. ಬ್ರಹ್ಮಕಲಶದ ಬಳಿಕ ಮಳೆ ಸುರಿದು ಭೂಮಂಡಲವನ್ನು ನೆನೆಸಿ ಶುದ್ಧಗೊಳಿಸುವ ಪ್ರಕ್ರಿಯೆ ಸಾಮಾನ್ಯ ನಡೆಯುವುದಾಗಿದ್ದು, ಮಧೂರಿ ನಲ್ಲೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಸುರಿದ ಮಳೆಗೆ ಅಲ್ಪ ಸ್ವಲ್ಪ ಸಮಸ್ಯೆಗಳು ಕಂಡು ಬಂದರೂ ಇದ್ಯಾವುದೂ ಭಕ್ತಜನಕೋಟಿಗೆ ತೊಡಕಾಗಿಲ್ಲ.

ದಕ್ಷಿಣ ಭಾರತ ಮಹಾಕುಂಭಮೇಳವೆಂದು ಕೊಂಡಾಡಲ್ಪಟ್ಟ ಮೂಡಪ್ಪ ಸೇವೆಯ ಇತಿಹಾಸದಲ್ಲಿ ದಾಖಲಾಗುವ ಮಹಾ ಕಾರ್ಯವಾಗಿದೆ. ನಿರಂತರ ಹರಿದು ಬಂದ ಭಕ್ತಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮಾಡಿದ ವ್ಯವಸ್ಥೆ, ಅಚ್ಚುಕಟ್ಟುತನ ಭಕ್ತರ ಹೃದಯ ತುಂಬಿಸಿದೆ. ದೇವರ ಅನುಗ್ರಹದೊಂದಿಗೆ ಕಾರ್ಯಕರ್ತರ ಸೇವೆ ಭಕ್ತರ ಮನಸ್ಸಲ್ಲಿ ಅಚ್ಚಳಿಯದೆ ನಿಂತಿದೆ. ಧಾರ್ಮಿಕ, ಸಾಂಸ್ಕೃತಿಕ, ವೈದಿಕ ಕಾರ್ಯಕ್ರಮಗಳೆಲ್ಲ ಸುಸೂತ್ರವಾಗಿ ನಡೆದು ಯಾವುದಕ್ಕೂ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಮಾತು ಭಕ್ತರ ಹೃದಯಾಂತರಾಳದಿಂದ ಹೊರ ಬಂದಿದೆ.

ವಿವಿಧ ಸ್ಥಳಗಳಿಂದ ಏಕ ಉದ್ದೇಶದೊಂದಿಗೆ ತಲುಪಿದ ಜನಸಾಗರ ಮಧೂರನ್ನು ಅಕ್ಷರಶಃ ಜನಸಾಗರವನ್ನಾಗಿ ಮಾಡಿದೆ. ಕಳೆದ ಹಲವು ದಿನಗಳಿಂದ ನಡೆದ ವಿವಿಧ ಕಾರ್ಯಕ್ರಮಗಳಿಗೆ ಇಂದು ಸಮಾಪ್ತಿ ಹಾಡಲಾಗುವುದು. ನಿನ್ನೆ ಸಂಜೆ ಧ್ವಜಾವರೋಹಣದೊಂದಿಗೆ ಉತ್ಸವ ಸಮಾಪ್ತಿಯಾಗಿದ್ದು, ಇಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಸಮಾರೋಪ ಸಮಾರಂಭ ಜರಗಿತು. ಕ್ಷೇತ್ರದ ವಾರ್ಷಿಕ ವಿಷು ಉತ್ಸವಕ್ಕೆ ಇಂದು ಗೊನೆ ಮುಹೂರ್ತವು ಇದೇ ಶುಭಗಳಿಗೆಯಲ್ಲಿ ನಡೆಯಿತು.

Leave a Reply

Your email address will not be published. Required fields are marked *

You cannot copy content of this page