ಕಾರಿನಲ್ಲಿ ಸಾಗಿಸುತ್ತಿದ್ದ 40ಲಕ್ಷ ರೂ. ವಶ: ಇಬ್ಬರ ಸೆರೆ
ಕಾಸರಗೋಡು: ಕಾರಿನಲ್ಲಿ ಯಾವುದೇ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂಪಾಯಿ ಗಳನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕರ್ನಾಟಕ ನಿವಾಸಿಗಳಾದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ಕೂಟುಪುಳದ ಅಬಕಾರಿ ಚೆಕ್ ಪೋಸ್ಟ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ರಾಜೇಶ್ ಕೋಮಾತ್ತ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಕರ್ನಾಟಕ ಭಾಗದಿಂದ ಬಂದ ಫ್ಲೇರ್ಚುನರ್ ಕಾರಿನಲ್ಲಿ ಹಣ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕಣ್ಣೂರಿನ ಆಧಾಯ ತೆರಿಗೆ ಅಧಿಕಾರಿಗಳು ತಲುಪಿ ಕಾರನ್ನು ಪರಿಶೀಲಿಸಿದಾಗ 40 ಲಕ್ಷ ರೂಪಾಯಿ ಪತ್ತೆಯಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಕರ್ನಾಟಕದ ಪೆರಿಯಾಪಟ್ಟಣ ನಿವಾಸಿ ಬಿ.ಎಸ್. ರಾಮಚಂದ್ರ ಹಾಗೂ ಚಾಲಕನನ್ನು ಕಸ್ಟಡಿಗೆ ತೆಗೆಯಲಾಗಿದೆ. ಹಣ, ಕಾರು ಹಾಗೂ ಕಸ್ಟಡಿಗೊಳಗಾದವರನ್ನು ಕಲ್ಲಿಕೋಟೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.