ಕಾಲ್ನಡೆಯಾಗಿ ಸಂಚರಿಸಿ ಗಾಂಜಾ ಮಾರಾಟ: ತೃಕರಿಪುರ ನಿವಾಸಿ ಸೆರೆ

ಕಾಸರಗೋಡು: ಕಾಲ್ನಡೆ ಯಾಗಿ ಸಂಚರಿಸಿ ಅಗತ್ಯದವರಿಗೆ ಗಾಂಜಾ ತಲುಪಿಸಿಕೊಡುವ ಯುವಕ ಸೆರೆಯಾಗಿದ್ದಾನೆ. ಬಿಹಾರ್ ಪೂರ್ಣಿಯ ಬಾಂತ್ ತೋಲಾ ವಾಬ್ ನಿವಾಸಿ, ಪ್ರಸ್ತುತ ತೃಕರಿಪುರ ಈಸ್ಟ್ ಮೊಟ್ಟಮ್ಮಲ್‌ನ ಸೈನುದ್ದೀನ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಲೀಂ ಅನ್ಸಾರಿ (45)ನನ್ನು ಚಂದೇರ ಎಸ್‌ಐ ಕೆ.ಪಿ. ಸತೀಶ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ ಮೊಟ್ಟಮ್ಮಲ್ ಮಧುರಕೈ ರಸ್ತೆ ಬದಿಯಲ್ಲಿ ಅನ್ಸಾರಿ ನಿಂತಿದ್ದನು. ಈ ಮಧ್ಯೆ ಎಸ್‌ಐ ಹಾಗೂ ತಂಡ ಸಂಚರಿಸಿದ ಪೊಲೀಸ್ ವಾಹನವನ್ನು ಕಂಡು ಅನ್ಸಾರಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಶಂಕೆ ತೋರಿ ಆತನನ್ನು ಸೆರೆ ಹಿಡಿದಿದ್ದಾರೆ.

ಈ ವೇಳೆ ಆತನ ಕೈಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ 17 ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಪತ್ತೆಹಚ್ಚಲಾಗಿದೆ. ಅಗತ್ಯದವರಿಗೆ ನೇರವಾಗಿ ಗಾಂಜಾ ತಲುಪಿಸಲು ಪ್ಯಾಕೆಟನ್ನು ಸಿದ್ಧಪಡಿಸಿ ಇಟ್ಟಿರಬೇಕೆಂದು ಶಂಕಿಸಲಾಗಿದೆ. ಪೊಲೀಸ್ ತಂಡದಲ್ಲಿ ಪ್ರೊಬೆಷನರಿ ಎಸ್‌ಐ ಮೊಹಮ್ಮದ್ ಮಹಸಿನ್, ಎಎಸ್‌ಐ ಲಕ್ಷ್ಮಣನ್, ಚಾಲಕ ಹರೀಶ್ ಸಹಕರಿಸಿದರು.

You cannot copy contents of this page