ಕಾಸರಗೋಡು ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಬೇಕು- ಮುಖ್ಯ ಕಾರ್ಯದರ್ಶಿಗೆ ಮಾನವ ಹಕ್ಕು ಆಯೋಗ ನಿರ್ದೇಶ
ಕಾಸರಗೋಡು: ಆರೋಗ್ಯರಂಗದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸೌಕರ್ಯ ಗಳು ತೀರಾ ಕಡಿಮೆಯಾಗಿರುವುದರಿಂದ ನಿರ್ದಿಷ್ಟ ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಲು ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕೆಂದು ಮಾನವಹಕ್ಕು ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. ಜಿಲ್ಲೆಯಲ್ಲಿ ಆರೋಗ್ಯ ರಂಗದಲ್ಲಿ ಸೌಕರ್ಯಗಳು ಕಡಿಮೆಯಾಗಿರು ವುದರಿಂದ ಇಲ್ಲಿನ ಜನತೆ ಕರ್ನಾಟಕವನ್ನು ಆಶ್ರಯಿಸಬೇಕಾಗಿ ಬರುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ ದೂರಿನ ಮೇಲೆ ಆಯೋಗ ಈ ನಿರ್ದೇಶ ನೀಡಿದೆ.
ಜಿಲ್ಲಾಧಿಕಾರಿ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತುತ ಆಸ್ಪತ್ರೆ ಬ್ಲೋಕ್ನ ನಿರ್ಮಾಣ ಚಟುವಟಿಕೆ ನಿಲುಗಡೆ ಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿಂದಿನ ದರದಲ್ಲಿ ಕೆಲಸ ನಿರ್ವ ಹಿಸಲು ಸಾಧ್ಯವಿಲ್ಲವೆಂದು ಗುತ್ತಿಗೆದಾರ ತಿಳಿಸಿದ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿ ನಿಲುಗಡೆಗೊಳಿಸಲಾಗಿದೆ. ಇದರಿಂದ ಗುತ್ತಿಗೆದಾರನನ್ನು ಸರಕಾರ ಹೊರತುಪಡಿಸಿದೆ. ಆಸ್ಪತ್ರೆ ಬ್ಲೋಕ್ನ ಕೆಲಸ ಪೂರ್ತಿಗೊಳಿಸಬೇಕಾದಲ್ಲಿ ಸೆಕ್ರೆಟರಿಯೇಟ್ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಕಾಡೆಮಿಕ್ ಬ್ಲೋಕ್ನ ನಿರ್ಮಾಣ ಪೂರ್ಣಗೊಂಡಿದೆ. ನೌಕರರ ಕ್ವಾಟರ್ಸ್ನ ಕೆಲಸ 70 ಶೇಕಡಾದಷ್ಟು ಪೂರ್ಣಗೊಂಡಿದೆ. ಆದರೆ ಹುಡುಗಿಯರ ಹಾಸ್ಟೆಲ್, ಟೀಚರ್ಸ್ ಕ್ವಾರ್ಟರ್ಸ್ ಎಂಬಿವುಗಳ ಕಾಮಗಾರಿ ಪೂರ್ತಿಗೊಂಡಿಲ್ಲ. ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು 3 ಲಕ್ಷ ರೂಪಾಯಿ ಶಾಸಕರ ಫಂಡ್ನಿಂದ ಮಂಜೂರು ಮಾಡಲಾಗಿದೆ. ವಿದ್ಯುತ್ ಸಂಪರ್ಕಕ್ಕೆ 18 ಲಕ್ಷ ರೂ. ಅಗತ್ಯವಿದೆ.
ಕುಡಿಯುವ ನೀರು ಸಂಪರ್ಕಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ ಜಲ ಪ್ರಾಧಿಕಾರಕ್ಕೆ ನೀಡಿದ್ದರೂ ಜಲ ಪ್ರಾಧಿಕಾರ ಕೆಲಸ ಪೂರ್ತಿಗೊಳಿಸಿಲ್ಲ ಎನ್ನಲಾಗಿದೆ. ಎ.ಎ. ಅಬ್ದುಲ್ ಸತ್ತಾರ್ ಎಂಬವರು ನೀಡಿದ ದೂರಿನಂತೆ ಮಾನವ ಹಕ್ಕು ಆಯೋಗ ಕ್ರಮ ಕೈಗೊಂಡಿದೆ.