ಕುಂಬಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಗುಣಮುಖರಾಗಿ ಸಹೋದರರೊಂದಿಗೆ ಊರಿಗೆ
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಆಟೋಚಾಲಕರು ಸಕಾಲಿಕವಾಗಿ ಚಿಕಿತ್ಸೆ ಸಹಿತ ನೆರವು ಒದಗಿಸಿದ ಫಲವಾಗಿ ವ್ಯಕ್ತಿ ಇದೀಗ ಅವರ ಸಂಬಂಧಿಕರನ್ನು ಸೇರಲು ಸಾಧ್ಯವಾಯಿತು. ಕರ್ನಾಟಕದ ಗುಂಡ್ಲುಪೇಟೆ ಹುಸೈನ್ ನಗರದ ಅಲ್ತಾಫ್ ಎಂಬವರು ಸುರಕ್ಷಿತವಾಗಿ ಅವರು ಸಹೋದರರೊಂದಿಗೆ ಊರಿಗೆ ತೆರಳಿದ್ದಾರೆ. ಮಾರ್ಚ್ ತಿಂಗಳ ಮೊದಲ ವಾರ ಅಲ್ತಾಫ್ ಕುಂಬಳೆ ರೈಲ್ವೇ ನಿಲ್ದಾಣಕ್ಕೆ ತಲುಪಿದ್ದರು. ಮಾರ್ಚ್ ೨೨ರಂದು ರೈಲ್ವೇ ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದಾಗ ಅಲ್ತಾಫ್ ಬಿದ್ದು ಗಾಯಗೊಂಡಿದ್ದರೆನ್ನಲಾಗಿದೆ. ಇದರಿಂದ ನಡೆದಾಡಲು ಭಾರೀ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಈ ವಿಷಯ ತಿಳಿದ ಕುಂಬಳೆಯ ಆಟೋಚಾಲಕರು ಅಲ್ತಾಫ್ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರು. ಆಟೋ ಚಾಲಕರು ನೀಡಿದ ಮಾಹಿತಿ ಪ್ರಕಾರ ಮಂಜೇಶ್ವರ ಸ್ನೇಹಾಲಯದ ಅಧಿಕಾರಿಗಳು ಕುಂಬಳೆಗೆ ತಲುಪಿ ಅಲ್ತಾಫ್ರನ್ನು ಕರೆದೊಯ್ದಿದ್ದರು. ಈ ಬಗ್ಗೆ ‘ಕಾರವಲ್’ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ಅಲ್ಲದೆ ಈ ಬಗ್ಗೆ ಸ್ನೇಹಾಲಯದ ಅಧಿಕಾರಿಗಳು ಹಾಗೂ ಆಟೋ ಚಾಲಕರು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದರು. ವಿಷಯ ತಿಳಿದು ಅಲ್ತಾಫ್ರ ಸಹೋದರರಾದ ತೌಫಿಕ್ ಹಾಗೂ ಫಾರೂಕ್ ಮಂಜೇಶ್ವರ ಸ್ನೇಹಾಲಯಕ್ಕೆ ತಲುಪಿ ಅಲ್ತಾಫ್ರನ್ನು ಭೇಟಿಯಾದರು. ಅಲ್ತಾಫ್ ಒಂದು ವರ್ಷ ಹಿಂದೆ ಮನೆಯಿಂದ ಹೋದವರು ಮರಳಿ ಬಂದಿಲ್ಲವೆಂದೂ ಇದೀಗ ಇವರನ್ನು ಭೇಟಿಯಾಗಲು ಸಾಧ್ಯವಾದುದಕ್ಕೆ ಭಾರೀ ಸಂತೋಷವಾಯಿತೆಂದು ಸಹೋದರರು ತಿಳಿಸಿದ್ದಾರೆ. ಅಲ್ತಾಫ್ರನ್ನು ಪರಿಚರಿಸಿ ಅವರು ಆರೋಗ್ಯವಂತರಾಗಿ ಮತ್ತೆ ಕುಟುಂಬದೊಂದಿಗೆ ಸೇರಲು ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿಯೂ ತೌಫಿಕ್ ಹಾಗೂ ಫಾರೂಕ್ ತಿಳಿಸಿದ್ದಾರೆ.