ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಪುನರ್‌ಯತ್ನ: ಕ್ರಿಯಾ ಸಮಿತಿಯಿಂದ ತಡೆ

ಕುಂಬಳೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ನಿಲುಗಡೆಗೊಳಿಸಿದ್ದ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಯತ್ನ ಮತ್ತೆ ಆರಂಭಿಸಿದ್ದು, ಕೂಡಲೇ ಅದಕ್ಕೆ ಕ್ರಿಯಾಸಮಿತಿ ತಡೆಯೊಡ್ಡಿದೆ. ನಿನ್ನೆ ಮಧ್ಯಾಹ್ನ ವೇಳೆ ಟೋಲ್ ಬೂತ್ ನಿರ್ಮಿಸಲು ಉದ್ದೇಶಿಸಿದ ಸ್ಥಳಕ್ಕೆ ನೌಕರರು ತಲುಪಿದ್ದರು. ಈ ಬಗ್ಗೆ ತಿಳಿದು ಕ್ರಿಯಾಸಮಿತಿ ಕಾರ್ಯ ಕರ್ತರು ಅಲ್ಲಿಗೆ ತಲುಪಿ ಕೆಲಸ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಉನ್ನತ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುವವರೆಗೆ ನಿರ್ಮಾಣ ಚಟುವಟಿಕೆ ನಿಲ್ಲಿಸಲು ಕಾಸರಗೋಡು ಕಲೆಕ್ಟರೇಟ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಿಲ್ಲಾಧಿಕಾರಿ ಕೈಗೊಂಡ ಈ ನಿರ್ಧಾರಕ್ಕೆ ವಿರುದ್ಧವಾಗಿ ಹೆದ್ದಾರಿ ಅಧಿಕಾರಿಗಳು ಮತ್ತೆ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿಸಲು ಯತ್ನಿಸಿರುವುದಾಗಿ ಕ್ರಿಯಾ ಸಮಿತಿ ಆರೋಪಿಸಿದೆ.

 ಕ್ರಿಯಾ ಸಮಿತಿ ಪದಾಧಿಕಾರಿಗಳು ಸಂಬಂಧ ಪಟ್ಟವರೊಂದಿಗೆ ಸಮಾ ಲೋಚಿಸಿದ ಬಳಿಕ ನೌಕರರು ಕೆಲಸ ನಿಲ್ಲಿಸಿದರು. ಕ್ರಿಯಾ ಸಮಿತಿ ನೇತಾರರಾದ ಸಿ.ಎ. ಸುಬೈರ್, ಎ.ಕೆ. ಆರಿಫ್, ಅನ್ವರ್ ಆರಿಕ್ಕಾಡಿ, ಲತೀಫ್ ಕುಂಬಳೆ ಮೊದಲಾದವರ ನೇತೃತ್ವದಲ್ಲಿ ೨೫ರಷ್ಟು ಮಂದಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಇದೇ ವೇಳೆ ರಾತ್ರಿ ವೇಳೆ ಕಾಮಗಾರಿ ನಡೆಸಬಹುದೇ ಎಂಬ ಸಂಶಯದಿಂದ ಕ್ರಿಯಾ ಸಮಿತಿ ಕಾರ್ಯಕರ್ತರು ನಿನ್ನೆ ರಾತ್ರಿ ಆ ಪರಿಸರದಲ್ಲಿ ತೀವ್ರ ನಿಗಾ ಇರಿಸಿದ್ದರು.

Leave a Reply

Your email address will not be published. Required fields are marked *

You cannot copy content of this page