ಅಧ್ಯಾಪಿಕೆ, ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ : ಸ್ಕೂಟರ್‌ನಲ್ಲಿ ತಲುಪಿ ಅಧ್ಯಾಪಿಕೆಗೆ ಹಲ್ಲೆಗೈದ ಮಹಿಳೆಯರಿಗಾಗಿ ಶೋಧ

ಮಂಜೇಶ್ವರ: ಕಡಂಬಾರ್‌ನಲ್ಲಿ ಯುವ ಅಧ್ಯಾಪಿಕೆ ಹಾಗೂ ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಗೆ ಹಲ್ಲೆಗೈಯ್ಯುವ ಸಿಸಿ ಟಿವಿ ಕ್ಯಾಮರಾ ದೃಶ್ಯಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ದಂಪತಿಯ ಸಾವಿನಲ್ಲಿ ನಿಗೂಢತೆ ತೀವ್ರಗೊಂಡಿದೆ. ಕಡಂಬಾರ್ ಚೆಂಬುಪದವು ನಿವಾಸಿ ಅಜಿತ್ (35), ಪತ್ನಿಯೂ ಖಾಸಗಿ ಶಾಲೆಯ ಅಧ್ಯಾಪಿಕೆಯಾದ ಶ್ವೇತ (28) ಎಂಬಿವರು ಈ ತಿಂಗಳ ೬ರಂದು ಮನೆಯಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರರ ಹರೆಯದ ಪುತ್ರನನ್ನು ಬಂದ್ಯೋಡ್‌ನಲ್ಲಿರುವ ಅಜಿತ್‌ರ ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಮರಳಿದ ಬಳಿಕ ದಂಪತಿ ವಿಷ ಸೇವಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಹೇಳುವಂತಹ ಯಾವುದೇ ಸಮಸ್ಯೆಗಳು ಅಜಿತ್‌ಗೆ ಹಾಗೂ ಪತ್ನಿಗೆ ಇರಲಿಲ್ಲವೆಂದು ಸಂಬಂಧಿಕರು ಹೇಳುತ್ತಿದ್ದಾರೆ. ಈ ಮಧ್ಯೆ ಶ್ವೇತರಿಗೆ ಹಲ್ಲೆಗೈಯ್ಯುವ ದೃಶ್ಯಗಳು ಬೆಳಕಿಗೆ ಬಂದಿದೆ. ಓರ್ವ ಮಹಿಳೆ ಸ್ಕೂಟರ್‌ನಲ್ಲಿ ಕುಳಿತುಕೊಂಡಿ ದ್ದಾಗ ಇನ್ನೋರ್ವ ಮಹಿಳೆ ಶ್ವೇತರಿಗೆ ಹಲ್ಲೆಗೈಯ್ಯುವ ದೃಶ್ಯಗಳು ಪತ್ತೆಯಾಗಿದೆ. ಮನೆಯ ಸಮೀಪದಲ್ಲೇ ಈ ಘಟನೆ ನಡೆದಿರುವು ದಾಗಿ ತಿಳಿದು ಬಂದಿದೆ. ಆದರೆ ಸ್ಕೂಟರ್‌ನಲ್ಲಿ ತಲುಪಿದ ಮಹಿಳೆಯರು ಯಾರೆಂದು ಸ್ಪಷ್ಟಗೊಂಡಿಲ್ಲ. ಹಲ್ಲೆಗೈದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಅಜಿತ್ ಹಾಗೂ ಶ್ವೇತರ ಮೃತದೇಹಗಳ ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ನಿನ್ನೆ ಮಧ್ಯಾಹ್ನ ಸ್ವ-ಗೃಹಕ್ಕೆ ತಲುಪಿಸಿ ಹೊಸಂಗಡಿ ರಾಮತ್ತಮಜಲು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

RELATED NEWS

You cannot copy contents of this page