ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ ಐದೂವರೆ ಕಿಲೋ ಗಾಂಜಾ ವಶ

ಹೊಸಂಗಡಿ:  ಅಬಕಾರಿ ತಂಡ ನಡೆಸಿದ ಮಿಂಚಿನ ಕಾರ್ಯಾಚರಣೆ ಯಲ್ಲಿ ಕೇರಳ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೇರಳಕ್ಕೆ ಸಾಗಿಸಲಾಗುತ್ತಿದ್ದ ಐದೂವರೆ ಕಿಲೋ ಗಾಂಜಾ ಪತ್ತೆಹಚ್ಚಿ  ವಶಪಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 5.40ರ ವೇಳೆ ಹೊಸಂಗಡಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗಾಂಜಾ ಸಾಗಿಸುವ ಬಗ್ಗೆ ಹೆಚ್ಚುವರಿ ಅಬಕಾರಿ ಆಯಕ್ತರಿಗೆ ಗುಪ್ತ ಮಾಹಿತಿ ಲಭಿಸಿದೆ.

ಅದರಂತೆ ಅವರು ನೀಡಿದ ನಿರ್ದೇಶದಂತೆ ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್, ಪ್ರಿವೆಂಟೀವ್‌ಆಫೀಸರ್ ಮನಾಸ್ ಕೆ.ಪಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಹಮೀದ್ ಮತ್ತು ಲಿಯರನ್ನೊಳಗೊಂಡ ತಂಡ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ಕೆಎಸ್‌ಆರ್‌ಟಿಸಿ ಬಸ್‌ನ್ನು ಇಂದು ಮುಂಜಾನೆ ಹೊಸಂಗಡಿಯಲ್ಲಿ ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ  ಬಸ್ಸಿನ ಸೀಟಿನ ಅಡಿ ಭಾಗದಲ್ಲಿ ಬ್ಯಾಗ್‌ನಲ್ಲಿ ತುಂಬಿಸಿ ಬಚ್ಚಿಡಲಾಗಿದ್ದ ಗಾಂಜಾ ಪತ್ತೆಯಾಗಿದೆ. ಆದರೆ ಈ  ಮೂಲನ್ನು ಯಾರು ಸಾಗಿಸುತ್ತಿದ್ದರೆಂಬುವುದನ್ನು ಗುರುತಿಸಲು ಅಬಕಾರಿ ತಂಡಕ್ಕೆ ಸಾಧ್ಯವಾಗಿಲ್ಲ. ವಶಪಡಿಸಲಾದ ಮಾಲನ್ನು ನಂತರ ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಸಾಗಿಸಿ ಪ್ರಕರಣ ದಾಖಲಿಸಲಾಗಿದೆ. ಈ ಮಾಲನ್ನು ಬಸ್ಸಿನಲ್ಲಿ ಸಾಗಿಸಿದ ವ್ಯಕ್ತಿ ಯಾರೆಂಬುವುದನ್ನು ಪತ್ತೆಹಚ್ಚುವ ಯತ್ನವನ್ನು ಅಬಕಾರಿ ತಂಡ ಆರಂಭಿಸಿದೆ.

You cannot copy contents of this page