ಕ್ರಿಸ್ಮಸ್, ಹೊಸ ವರ್ಷಾಚರಣೆ ಅಬಕಾರಿ ತಂಡದಿಂದ ವ್ಯಾಪಕ ದಾಳಿ: ಮದ್ಯ, ಗಾಂಜಾ, ಮಾದಕದ್ರವ್ಯ, ನಿಷೇಧಿತ ತಂಬಾಕು ಉತ್ಪನ್ನ ವಶ; ನಾಲ್ವರ ಸೆರೆ

ಕಾಸರಗೋಡು: ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೆ ಇನ್ನು ಕೆಲವು ದಿನಗಳು ಬಾಕಿ ಉಳಿದಿರುವಂತೆಯೇ ಈ ವೇಳೆ ಹೊರಗಿನಿಂದ ಜಿಲ್ಲೆಗೆ ಅಕ್ರಮ ಮದ್ಯ, ಮಾದಕ ದ್ರವ್ಯ ಇತ್ಯಾದಿಗಳು ಹರಿದು ಬರುವ ಸಾಧ್ಯತೆಯನ್ನು ಮನಗಂಡು ಅದನ್ನು ತಡೆಗಟ್ಟಲು ಅಬಕಾರಿ ತಂಡ ಜಿಲ್ಲೆಯಾದ್ಯಂತವಾಗಿ ನಿನ್ನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ವಿವಿಧೆಡೆಗಳಲ್ಲಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮದ್ಯ, ಗಾಂಜಾ, ಮಾದಕದ್ರವ್ಯ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿ ಅದಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಮಾತ್ರವಲ್ಲ ಒಂದು ಕಾರು ಮತ್ತು ಸ್ಕೂಟರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದರಂತೆ ಬದಿಯಡ್ಕ ಅಬಕಾರಿ ರೇಂಜ್‌ನ ಇನ್ಸ್‌ಪೆಕ್ಟರ್ ವಿನು. ಎಚ್.ರ ನೇತೃತ್ವದ ಅಬಕಾರಿ ತಂಡ ಶೇಣಿ ಗ್ರಾಮದ ಮಣಿಯಂಪಾರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೬೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನವೀನ ಎಂಬಾತನ ವಿರುದ್ಧ ಅಬಕಾರಿ ತಂಡ ಪ್ರಕರಣ ದಾಖಲಿಸಿಕೊಂಡಿದೆ. ಆದರೆ ಆ ವೇಳೆ ಆತ ತಪ್ಪಿಸಿಕೊಂಡಿರುವುದಾಗಿ ಅಧಿಕಾರಿಗಳಲ್ಲಿ ತಿಳಿಸಿದ್ದಾರೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದೇ ರೀತಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ರಾಧಾಕೃಷ್ಣನ್ ಪಿ.ಜಿ.ಯವರ ನೇತೃತ್ವದ ಅಬಕಾರಿ ತಂಡ ಚೆಮ್ನಾಡಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೨೩ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಮೊಹಮ್ಮದ್ ಸಾಜುದ್ದೀನ್ ಎ. (೨೬)ನನ್ನು ವಶಕ್ಕೆ ತೆಗೆದು ಆತನ ವಿರುದ್ಧ ಕೇಸು ದಾಖಲಿಸಲಾಗಿದೆ.

ಇನ್ನು ಪೆರ್ಲ ಅಬಕಾರಿ ತಪಾಸಣಾ ಕೇಂದ್ರದಲ್ಲಿ  ಬದಿಯಡ್ಕ ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ವಿನು ಎಚ್.ರ ನೇತೃತ್ವದ ಅಬಕಾರಿ ತಂಡ, ಪ್ರಸ್ತುತ ತಪಾಸಣಾ ಕೇಂದ್ರದ ಸಿಬ್ಬಂದಿಗಳು, ಮೋಟಾರು ವಾಹನ ಇಲಾಖೆ ತಂಡ ಮತ್ತು ಬದಿಯಡ್ಕ ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಿಂದ ೧.೨೬ ಗ್ರಾಂ ಆಮ್ ಫಿಟ್ ಮೈನ್ ಮಾದಕ ದ್ರವ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪೆರ್ಲದ ಅಬ್ದುಲ್ ಅಸೀಸ್ ಮತ್ತು ಮೊಹಮ್ಮದ್ ಹಾಶಿಂ ಎಂಬವರನ್ನು ಬಂಧಿಸಿ, ಅವರು ಬಂದ ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದೇ ರೀತಿ ಬದಿಯಡ್ಕ ರೇಂಜ್‌ನ ಇನ್ಸ್‌ಪೆಕ್ಟರ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ೪.೨೨ ಗ್ರಾಂ ಗಾಂಜಾದೊಂದಿಗೆ ಕುಂಬ್ಡಾಜೆಯ ಮೊಹಮ್ಮದ್ ಅಫ್ಸಲ್ ಎಂಬಾತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದೆ. ಇದರ ಹೊರತಾಗಿ ಕಾಸರಗೋಡು ಅಬಕಾರಿ ರೇಂಜ್‌ನ ಎಇಐ ಜೋಸೆಫ್‌ರ ನೇತೃತ್ವದ ತಂಡ ಕಾಸರಗೋಡು ರೈಲು ನಿಲ್ದಾಣ ಪರಿಸರದ ಅಂಗಡಿಯೊಂದರಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ಒಂದು ಕಿಲೋ ತಂಬಾಕು ಉತ್ಪನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದಕ್ಕೆ ಸಂಬಂಧಿಸಿ ಮೊಹಮ್ಮದ್ ಹನೀಫ್‌ನ ವಿರುದ್ಧ ಪ್ರಕರಣ ದಾಖಲಿಸಿ ಆತನಿಂದ ೧೦೦೦ ರೂ. ಜುಲ್ಮಾನೆ ವಸೂಲಿ ಮಾಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page