ಚರಂಡಿ ಅವ್ಯವಸ್ಥೆ: ಉಪ್ಪಳ-ಮೀಯಪದವು ರಸ್ತೆಯಲ್ಲಿ ಮಳೆ ನೀರು ಸಂಗ್ರಹ; ವಾಹನ, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಚರಂಡಿಯ ಅವ್ಯವಸ್ಥೆಯಿಂದ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಮಂಗಲ್ಪಾಡಿ ಮತ್ತು ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಉಪ್ಪಳ-ಮೀಯಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ರಸ್ತೆ ಉದ್ದಕ್ಕೂ ಅಲ್ಲಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದ ವಾಹನಗಳ ಸಹಿತ ಸ್ಥಳೀಯರಿಗೆ ನಡೆದಾಡಲು ಸಾಧ್ಯ ವಾಗುತ್ತಿಲ್ಲವೆಂದು ದೂರಲಾಗಿದೆ. ಮೊನ್ನೆ ಒಂದೇ ದಿನ ಸುರಿದ ಮಳೆಗೆ ದಡ್ಡಂಗಡಿ, ಕಂಚಿಲ  ಪರಿಸರದಲ್ಲಿ  ಮಳೆ ನೀರು ತುಂಬಿಕೊಂಡಿತ್ತು. ಇದೇ ರೀತಿಯಲ್ಲಿ ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗಿ ಬರಲಿದೆಯೆಂದು ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಈ ರಸ್ತೆ ಕೂಡಾ ಶೋಚನೀಯಾವಸ್ಥೆಯಿಂದ ಕೂಡಿದೆ.  ಇಕ್ಕಡೆಗಳಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿ ವಾಹನಗಳಿಗೆ ಸೈಡ್ ನೀಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲ ಬರುವ ಮೊದಲೇ ರಸ್ತೆಯ ಹೊಂಡ ಮುಚ್ಚಿ, ಚರಂಡಿ ದುರಸ್ತ್ತಿ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page