ಚುನಾವಣಾ ಅವ್ಯವಹಾರ ಹೇಳಿಕೆ : ಮಾಜಿ ಸಚಿವ ಜಿ. ಸುಧಾಕರನ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು
ಆಲಪ್ಪುಳ:1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಲಪ್ಪುಳ ಕ್ಷೇತ್ರದಲ್ಲಿ ಅಂಚೆ ಮತಗಳ ಕವರುಗಳನ್ನು ಒಡೆದು ಅದರಲ್ಲಿ ತಮ್ಮ ಪಕ್ಷದ ಪರವಾಗಿ ತಿದ್ದುಪಡಿ ತಂದಿದ್ದೆ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿರುವ ಸಿಪಿಎಂನ ಹಿರಿಯ ನೇತಾರ ಹಾಗೂ ಮಾಜಿ ಸಚಿವರೂ ಆಗಿರುವ ಜಿ. ಸುಧಾಕರನ್ ವಿರುದ್ಧ ಆಲಪ್ಪುಳ ಸೌತ್ ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಶಿಕ್ಷಾ ಕಾಯ್ದೆ (ಐಪಿಸಿ) ಸೆಕ್ಷನ್ ೪೬೮ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿ ಈ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿರುವ ಬೆಳವಣಿಗೆ ನಡೆದಿದ್ದು, 1989ರಲ್ಲಿ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿ ಹಳೇ ಐಪಿಸಿ ಸೆಕ್ಷನ್ಗಳ ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತದಾನದ ಗೌಪ್ಯತೆ ಉಲ್ಲಂಘನೆ, ಮತಗಟ್ಟೆ ವಶಪಡಿಸುವಿಕೆ ಮತ್ತು ವಂಚನೆಯ ಉದ್ದೇಶದಿಂದ ನಕಲಿ ದಾಖಲುಪತ್ರ ಸೃಷ್ಟಿಸುವಿಕೆ ಇತ್ಯಾದಿ ಸೆಕ್ಷನ್ಗಳ ಪ್ರಕಾರ ಈ ಪ್ರಕರಣ ದಾಖಲಿಸಲಾಗಿದೆ. ಇದು ಮೂರರಿಂದ ಏಳು ವರ್ಷ ತನಕ ಶಿಕ್ಷೆ ಹಾಗೂ ಜುಲ್ಮಾನೆ ಲಭಿಸುವ ಅಪರಾಧವಾಗಿದೆ.
ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿ. ಸುಧಾಕರನ್ ಬಂಧನ ಭೀತಿ ಎದುರಾಗಿದೆ. ಚುನಾವಣಾ ಅವ್ಯವಹಾರಕ್ಕೆ ಸಂಬಂಧಿಸಿ ಕೇಸು ದಾಖಲಿಸುವ ಮೊದಲು ಪೊಲೀಸರು ಜಿ. ಸುಧಾಕರನ್ರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಚುನಾವಣಾ ಆಯೋಗ ನೀಡಿದ ನಿರ್ದೇಶ ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಬಂಧನಕ್ಕೊಳಗಾಗದಿರಲು ಜಿ. ಸುಧಾಕರನ್ ಇನ್ನೊಂದೆಡೆ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯವನ್ನು ಸಮೀಪಿಸುವ ಪ್ರಯತ್ನದಲ್ಲೂ ತೊಡಗಿದೆ. ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಹಿರಂಗ ಸಭೆಯಲ್ಲೇ ಸುಧಾಕರನ್ ನೀಡಿರುವ ಹೇಳಿಕೆ ಹಾಗೂ ಅದರ ಹೆಸರಲ್ಲಿ ಅವರ ವಿರುದ್ಧ ಈಗ ಪೊಲೀಸರು ಕೇಸು ದಾಖಲಿಸಿಕೊಂಡಿರುವುದು ಆಡಳಿತ ಪಕ್ಷ ಸಿಪಿಎಂನ್ನು ತೀವ್ರ ಇಕ್ಕಟ್ಟಿಗೆ ಸಿಲುಕುವಂತೆಯೂ ಮಾಡಿದೆ.