ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ 8ವರ್ಷಗಳ ಬಳಿಕ ಸೆರೆ
ಕಾಸರಗೋಡು: ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ನ್ಯಾಯಾಲಯದಲ್ಲಿ ಹಾಜರಾಗದೆ ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ನೀಲಗಿರಿ ನಿವಾಸಿ ಪಾರ್ತಿವನ್ ಅಲಿಯಾಸ್ ರಮೇಶ್ (26) ಬಂಧಿತ ಆರೋಪಿ. ಈತ ನೀಲೇಶ್ವರಕ್ಕೆ ಸಮೀಪದ ಕರಿಂದಳಂ ಕರಿಂಬಿಲ್ ತರಲಡಿನ ಎಸ್ಟೇಟ್ನ ಮೇಲ್ನೋಟಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಕರಿಂದಳ ಚೂರಿ ಪಡದ ಪಿ.ವಿ. ಚಿಂಡನ್ (58) ಎಂಬವರನ್ನು 2018 ಫೆಬ್ರವರಿ 24ರಂದು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಪಾರ್ತಿವನ್ ಅಲಿಯಾಸ್ ರಮೇಶ್ ಈ ಹಿಂದೆ ಕರಿಂಬಿಲ್ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಕೊಲೆ ನಡೆದ ದಿನದಂದು ಚಿಂಡನ್ನವರು ತೋಟದ ಕಾರ್ಮಿಕರಿಗೆ ವೇತನ ನೀಡಲೆಂದು ಬಂದಾಗ ಅವರ ಕೈಯಲ್ಲಿ ಲಕ್ಷಾಂತರ ರೂ. ಇದ್ದಿರಬಹುದೆಂದು ಗ್ರಹಿಸಿ ಆರೋಪಿ ಕಲ್ಲಿನಿಂದ ಚಿಂಡನ್ರ ತಲೆಗೆ ಬಡಿದು ಕೊಲೆಗೈದನೆಂಬ ಆರೋಪದಂತೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಾತ್ರವಲ್ಲ ಕೊಲೆ ನಡೆದ ದಿನದಂದು ಆರೋಪಿಯನ್ನು ಪೊಲೀಸರು ಬಂಧಿಸಿ ನಂತರ ಆತನನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.
ಅದಾದ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿ ಸರಿಯಾದ ಸಮಯಕ್ಕೆ ನ್ಯಾಯಾಲಯದಲ್ಲಿ ಹಾಜರಾಗದೆ ಕಳೆದ ಎಂಟು ವರ್ಷ ತಲೆಮರೆಸಿಕೊಂಡಿದ್ದನು.
ಈತ ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ ಟಾಕ್ಸಿ ಚಾಲಕನಾಗಿ ದುಡಿಯುತ್ತಿದ್ದನೆಂಬ ಮಾಹಿತಿ ದಿನಗಳ ಹಿಂದೆ ಪೊಲೀಸರಿಗೆ ಲಭಿಸಿತ್ತು. ಅದರ ಜಾಡು ಹಿಡಿದು ಕಾಸರಗೋಡು ಸೈಬರ್ ಪೊಲೀಸ್ ಠಾಣೆ ಸಹಾಯದೊಂದಿಗೆ ನೀಲೇಶ್ವರ ಪೊಲೀಸ್ ಠಾಣೆ ಎಸ್ಐ ರತೀಶ್ರ ನೇತೃತ್ವದ ಪೊಲೀಸರ ತಂಡ ಕೊಯಂಬತ್ತೂರಿಗೆ ಸಾಗಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಸಫಲರಾಗಿದ್ದಾರೆ. ಬಂಧಿತನನ್ನು ನಂತರ ನೀಲೇಶ್ವರ ಠಾಣೆಗೆ ತಂದು ಬಳಿಕ ನ್ಯಾಯಾಲಯದ ನಿರ್ದೇಶದಂತೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಸಿವಿಲ್ ಪೊಲೀಸ್ ಆಫೀಸರ್ಗಳಾದ ಅಮಲ್ ರಾಮಚಂದ್ರನ್, ಪಿ.ವಿ. ಸುಭಾಷ್, ಕಾಸರಗೋಡು ಸೈಬರ್ ಸೆಲ್ನ ಶಿವನ್ ಎಂಬವರು ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದಲ್ಲಿ