ಜಿಲ್ಲೆಯಲ್ಲಿ ಭಾರೀ ವಿವಾದ ಸೃಷ್ಟಿಸಿದ ರೇಷ್ಮಾಳ ನಿಗೂಢ ಸಾವು: ವರ್ಷಗಳ ಬಳಿಕ ಆರೋಪಿ ಕೊನೆಗೂ ಸೆರೆ
ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ವಿವಾದ ಹಾಗೂ ನಿಗೂಢಕ್ಕೆ ಕಾರಣವಾದ ಹೊಸದುರ್ಗ ತಾಲೂಕಿನ ಅಂಬಲತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಎಣ್ಣಪಾರ ಮೊಯೋಲಂ ಕಾಲನಿಯ ರಾಮನ್- ಕಲ್ಯಾಣಿ ದಂಪತಿ ಪುತ್ರಿ ರೇಷ್ಮ (20)ಳ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ಆರೋಪಿಯನ್ನು ವರ್ಷಗಳ ಬಳಿಕಕ್ರೈಮ್ ಬ್ರಾಂಚ್ ಐ.ಜಿ. ಪಿ. ಪ್ರಕಾಶ್ರ ನೇತೃತ್ವದ ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಸಫಲವಾಗಿದೆ.
ಪಾಣತ್ತೂರು ಬಾಪ್ಪಂಗಯ ನಿವಾಸಿ ಹಾಗೂ ನಿರ್ಮಾಣ ವಲಯದ ಗುತ್ತಿಗೆ ದಾರನೂ ಆಗಿರುವ ಬಿಜು ಪೌಲೋಸ್ (೪೦) ಬಂಧಿತ ಆರೋಪಿ. ಈತನ ಬಂಧನದ ಕುರಿತಾಗ ಹೆಚ್ಚಿನ ಮಾಹಿತಿಯನ್ನು ತನಿಖಾ ತಂಡ ಇಂದು ಹೊರಬಿಡಲಿದೆ.
೨೦೧೧ ಜನವರಿಯಲ್ಲಿ ರೇಷ್ಮಾ ನಿಗೂಢವಾದ ರೀತಿಯಲ್ಲಿ ನಾಪತ್ತೆಯಾಗಿದ್ದಳು. ಅದಕ್ಕೆ ಸಂಬಂಧಿಸಿ ಆಕೆಯ ತಂದೆ ನೀಡಿದ ದೂರಿನಂತೆ ಅಂಬಲತರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದರೂ, ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ಈ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.
ಇದಕ್ಕೆ ಸಂಬಂಧಿಸಿ ಆರೋಪಿ ಬಿಜು ಪೌಲೋಸ್ನನ್ನು ಕ್ರೈಮ್ ಬ್ರಾಂಚ್ ಈ ಹಿಂದೆ ಹಲವು ಬಾರಿ ವಿಚಾರಣೆಗೊಳಪಡಿಸಿತ್ತು. ಆ ವೇಳೆ ರೇಷ್ಮಾ ಅಜಾನೂರಿನಲ್ಲಿ ತಾನು ವಾಸಿಸುತ್ತಿದ್ದ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳೆಂದೂ, ಬಳಿಕ ಆಕೆಯ ಮೃತದೇಹವನ್ನು ನಾನು ಪಾಣತ್ತೂರು ಪವಿತ್ರಂ ಹೊಳೆಗೆ ಎಸೆದೆನೆಂದು ಆತ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದನು. ಆದರೆ ರೇಷ್ಮಾಳ ಸಾವಿನ ಕಾರಣ ಇನ್ನೂ ನಿಗೂಢವಾಗಿಯೇ ಮುಂದುವರಿ ಯುತ್ತಿದೆ. ಅದನ್ನು ಬೇಧಿಸಿ ನಿಗೂಢತೆಯನ್ನು ಹೊರತರುವಂತೆ ಮಾಡುವ ತೀವ್ರ ಯತ್ನದಲ್ಲಿ ತನಿಖಾ ತಂಡ ತೊಡಗಿದೆ.
ರೇಷ್ಮಾ ನಾಪತ್ತೆಯಾದ ಬಳಿಕ ಹೊಳೆಯಲ್ಲಿ ಅಪರಿಚಿತ ಯುವತಿ ಯೋರ್ವಳ ಮೃತದೇಹವೊಂದು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಆದರೆ ಆ ಮೃತದೇಹ ಯಾರದೆಂದು ಪತ್ತೆಹಚ್ಚಲು ಅಂದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಅದರಿಂದಾಗಿ ಅದನ್ನು ಬಳಿಕ ದಫನಗೈಯ್ಯಲಾಗಿತ್ತು. ನಂತರ ಸಂಶಯದಿಂದ ಆ ಮೃತದೇಹವನ್ನು ದಫನಗೈದ ಸ್ಥಳದಿಂದ ಕ್ರೈಮ್ ಬ್ರಾಂಚ್ಪೊಲೀಸರು ಮೇಲೆತ್ತಿ ಅದರ ಅವಶಿಷ್ಟಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಆ ಮೃತದೇಹ ರೇಷ್ಮಳದ್ದಾ ಗಿದೆ ಎಂದು ಸಾಬೀತುಗೊಂಡಿದೆ. ಈ ಆಧಾರದಲ್ಲಿ ಕ್ರೈಮ್ ಬ್ರಾಂಚ್ ಪೊಲೀಸರು ನಡೆಸಿದ ಮುಂದಿನ ತನಿಖೆಯಲ್ಲಿ ಆರೋಪಿ ಬಿಜು ಪೌಲೋಸ್ನನ್ನು ವಯನಾಡಿನ ವರ್ಕ್ಶಾಪ್ನಿಂದ ನಿನ್ನೆ ರಾತ್ರಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈತನನ್ನು ಬಂಧಿಸಿದ ತಂಡದಲ್ಲಿ ಕ್ರೈಮ್ ಬ್ರಾಂಚ್ ಎಸ್ಪಿ ಪ್ರಜೀಶ್ ತೊಟ್ಟತ್ತಿಲ್, ಡಿವೈಎಸ್ಪಿ ಪಿ. ಮಧುಸೂಧನನ್ ನಾಯರ್, ಎಸ್ಐ ರಘು, ಎ.ಎಸ್.ಐ. ರತಿ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಾದ ಸುಮೇಶ್, ಮಹೇಶ್, ಪ್ರಭೇಶ್, ಲತೀಶ್ ಮತ್ತು ಶ್ರೀಜಿತ್ ಎಂಬವರು ಒಳಗೊಂಡಿದ್ದಾರೆ.