ಜಿಲ್ಲೆಯ ನಾಲ್ಕು ನದಿಗಳಿಂದ ಹೊಯ್ಗೆ ಸಂಗ್ರಹಿಸಲು ಅನುಮತಿ
ಕಾಸರಗೋಡು: ರಾಜ್ಯದಲ್ಲಿ ಹೊಯ್ಗೆ ಸಂಗ್ರಹಿಸಲು ಸರಕಾರ ಅನುಮತಿ ನೀಡಿದ ೧೭ ನದಿಗಳಲ್ಲಿ ನಾಲ್ಕು ನದಿಗಳು ಜಿಲ್ಲೆಯಲ್ಲಿವೆ. ಉಪ್ಪಳ, ಮೊಗ್ರಾಲ್, ಶಿರಿಯ, ಪಯಸ್ವಿನಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಲು ಸರಕಾರ ಅನುಮತಿ ನೀಡಿದೆ.
ಹೊಯ್ಗೆ ಆಡಿಟ್ ವರದಿಯಲ್ಲಿ ಈ ಹೊಳೆಗಳಿಂದ ಹೊಯ್ಗೆ ಲಭ್ಯತೆ ಪತ್ತೆಹಚ್ಚಲಾಗಿತ್ತು. ಇದರ ಆಧಾರದಲ್ಲಿ ಹೊಯ್ಗೆ ತೆಗೆಯಲು ಒಪ್ಪಿಗೆ ನೀಡಲಾಗಿದೆ. ಹೊಯ್ಗೆಯ ಪ್ರಮಾಣತೆಗೆಯಲು ಸಾಧ್ಯವಿರುವ ಹೊಯ್ಗೆಯ ಪ್ರಮಾಣ ಎಂಬಿವು ಸೇರಿಸಿ ಜಿಲ್ಲಾ ಸರ್ವೆ ವರದಿ ಸಿದ್ಧಪಡಿಸಿ ನೈಸರ್ಗಿಕ ಇಲಾಖೆಯ ಅನುಮತಿ ಲಭಿಸಿದ ಬಳಿಕವೇ ಹೊಯ್ಗೆ ಸಂಗ್ರಹ ಆರಂಭಿಸಲಾಗುವುದು. ಜಿಲ್ಲಾಧಿಕಾರಿಯ ನೇತೃತ್ವದಲ್ಲಿರುವ ತಜ್ಞ ಸಮಿತಿಯ (ಡಿಇಸಿ) ಮೇಲ್ನೋಟದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ನೇತೃತ್ವದಲ್ಲಿ ಕಡವ್ ಸಮಿತಿಗಳು ಹೊಯ್ಗೆ ಸಂಗ್ರಹಕ್ಕೆ ನೇತೃತ್ವ ನೀಡುವುದು.
ಯಾವೆಲ್ಲ ಪ್ರದೇಶಗಳಿಂದ ಹೊಯ್ಗೆ ಸಂಗ್ರಹಿಸಬೇಕು ಎಂದು ತೀರ್ಮಾನಿಸಬೇಕಾಗಿದೆ. ಹೊಯ್ಗೆ ಸಂಗ್ರಹಿಸುವ ಕಡವುಗಳು, ಅವುಗಳ ವಿಸ್ತೀರ್ಣವನ್ನು ಸರಕಾರ ಮತ್ತೆ ತೀರ್ಮಾನಿಸಲಿದೆ. ಈ ಮೊದಲು ನದಿಗಳಿಂದ ಹೊಯ್ಗೆ ಸಂಗ್ರಹ ನಡೆಸಲಾಗುತ್ತಿತ್ತು.