ಜೆಸಿಬಿ ಆಪರೇಟರ್ ನೇಣು ಬಿಗಿದು ಸಾವು: ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಓರ್ವ ಸೆರೆ
ಬದಿಯಡ್ಕ: ಜೆಸಿಬಿ ಆಪರೇಟರ್ ಬಾಡಿಗೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ಆರೋಪದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿಳಿಂಗಾರು ನಿವಾಸಿ ಗಣೇಶ್ (36) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದ ಸುಳ್ಯ ಪೆರಾಜೆ ನಿಧಿಮಲೆ ನಿವಾಸಿ ಟಿ.ಎನ್. ಕುಮಾರ್ (26) ರ ಸಾವಿಗೆ ಸಂಬಂಧಿಸಿ ಗಣೇಶ್ನನ್ನು ಬಂಧಿಸಲಾ ಗಿದೆ. ಪಾಡ್ಲಡ್ಕ ನಿಡುಗಳದ ಬಾಡಿಗೆ ಮನೆಯ ಅಡುಗೆ ಕೋಣೆ ಯೊಳಗೆ ಕಳೆದ ಸೋಮವಾರ ಸಂಜೆ ಕುಮಾರ್ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೆಲಸ ಮುಗಿಸಿ ಅವರು ಅಂದು ಸಂಜೆ ವಾಸಸ್ಥಳಕ್ಕೆ ತಲುಪಿದ್ದರು. ಅನಂತರ ಓರ್ವ ಸ್ನೇಹಿತ ಫೋನ್ ಕರೆ ಮಾಡಿದರೂ ಕುಮಾರ್ ಫೋನ್ ಎತ್ತಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಉಂಟಾಗದ ಹಿನ್ನೆಲೆಯಲ್ಲಿ ಸಂಶಯಗೊಂಡು ಸ್ನೇಹಿತ ಮನೆಗೆ ತೆರಳಿ ನೋಡಿದಾಗ ಕುಮಾರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜೆಸಿಬಿ ಮಾಲಕ ಎನ್. ಮಹೇಶ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ನಡೆಸಿದ ತನಿಖೆಯಲ್ಲಿ ಗಣೇಶ್ನ ಬೆದರಿಕೆಯೇ ಕುಮಾರ್ರ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ.