ತಮ್ಮನನ್ನು ರಕ್ಷಿಸಲು ಕೆರೆಗಿಳಿದ ಅಣ್ಣ ನೀರಿನಲ್ಲಿ ಮುಳುಗಿ ದಾರುಣ ಸಾವು

ಕಾಸರಗೋಡು: ಮಸೀದಿಯ ಕೆರೆಗೆ ಬಿದ್ದ ತಮ್ಮನ್ನು ರಕ್ಷಿಸಲು ಇಳಿದ ಅಣ್ಣ ನೀರಿನಲ್ಲಿ ಮುಳುಗಿ ದಾರುಣ ವಾಗಿ ಸಾವನ್ನಪ್ಪಿದ ಘಟನೆ ನಗರದ ತಳಂಗರೆಯಲ್ಲಿ ನಿನ್ನೆ ನಡೆದಿದೆ.

ಬೆಂಗಳೂರು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ತಾನಿ ರಸ್ತೆಯ ಮುಜಾಹಿದ್ ಎಂಬವರ ಪುತ್ರ ಫೈಸಲ್ (22) ಸಾವನ್ನಪ್ಪಿದ ದುರ್ದೈವಿ.

ಫೈಸಲ್ ತನ್ನ ಕುಟುಂಬದವರ ಸಹಿತ ನಿನ್ನೆ ತಳಂಗರೆ ಮಾಲಿಕ್ ದೀನಾರ್ ದರ್ಗಾಕ್ಕೆ ತೀರ್ಥಾಟನೆಗೆ ಬಂದಿದ್ದರು. ಆ ತಂಡದಲ್ಲಿ ಒಟ್ಟು 11 ಮಂದಿ ಇದ್ದರು. ಈ ಮಧ್ಯೆ ಮಸೀದಿಯ ಕೆರೆಯಲ್ಲಿ ಫೈಸಲ್‌ರ ತಮ್ಮ ಸಕ್ಲೈನ್ ಸ್ನಾನಕ್ಕಿಳಿದಾಗ ಆತ  ಜಾರಿ ನೀರಿಗೆ ಬಿದ್ದನು. ಅದನ್ನು ಕಂಡ ಫೈಸಲ್ ತಕ್ಷಣ ಕೆರೆಗೆ ಹಾರಿ ತಮ್ಮನನ್ನು ಹಿಡಿದು ದಡಕ್ಕೆ ಒಯ್ದು  ಪ್ರಾಣ ಉಳಿಸಿದರೂ ಕೆರೆಯಿಂದ ಮೇಲಕ್ಕೇರುವಷ್ಟರಲ್ಲಿ ಫೈಸಲ್ ನೀರಿನಲ್ಲಿ ಮುಳುಗಿದರು.   ಕೂಡಲೇ  ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ಊರವರ ಸಹಾಯದಿಂದ ಫೈಸಲ್‌ರನ್ನು ಕೆರೆಯಿಂದ ಮೇಲಕ್ಕೆತ್ತಿ ತಮ್ಮನ ಸಹಿತ ಆಸ್ಪತ್ರೆಗೆ ಸಾಗಿಸಿದರೂ ಫೈಸಲ್‌ರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ಈ ಬಗೆ ತನಿಖೆ ನಡೆಸಿದರು. ಮೃತದೇಹವನ್ನು ನಂತರ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಬೆಂಗಳೂರಿಗೆ ಸಾಗಿಸಲಾಯಿತು.

ಮೃತ ಫೈಸಲ್ ತಂದೆಯ ಹೊರತಾಗಿ ತಾಯಿ ಶಕೀಲಾ, ಇತರ ಸಹೋದರರಾದ ರಿಯಾನ್, ಸಲ್ಮಾನ್, ಅಫೈಮ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page