ದೇಶದಲ್ಲಿಯೇ ಮೊದಲಾಗಿ ಆನ್‌ಲೈನ್ ಭೂಮಿ ಹಸ್ತಾಂತರ ಮಾದರಿಯಾದ ಉಜಾರು ಉಳುವಾರು ವಿಲ್ಲೇಜ್ ಕಚೇರಿ

ಕುಂಬಳೆ: ದೇಶದಲ್ಲೇ ಪ್ರಥಮವಾಗಿ ಭೂಮಿ ಹಸ್ತಾಂತರ ಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಸಿದ ಜಿಲ್ಲೆಯ ಮೊದಲ ವಿಲ್ಲೇಜ್ ಕಚೇರಿಯಾಗಿದೆ ಉಜಾರು ಉಳುವಾರು. ಆನ್‌ಲೈನ್‌ನಲ್ಲಿ ಮೊದಲ ಆಧಾರ ದಾಖಲಾತಿ ನಡೆಸಲಾಯಿತು. ಕಂದಾಯ, ಸರ್ವೆ, ನೋಂದಾವಣೆ ಇಲಾಖೆಗಳು ಜಂಟಿಯಾಗಿ ಸಿದ್ಧಪಡಿಸಿದ ‘ಎಂಡೆ ಭೂಮಿ’ ಪೋರ್ಟಲ್ ಮೂಲಕ ಭೂಮಿ ಹಸ್ತಾಂತರ ಆನ್‌ಲೈನ್ ಆಗಿ ನಡೆಸಲಾಗಿದೆ. ಸಂಪೂರ್ಣ ಡಿಜಿಟಲ್ ಸರ್ವೆ ದೇಶದಲ್ಲಿಯೇ ಮೊದಲಾಗಿ ಪೂರ್ತಿಗೊಳಿಸಿದ ವಿಲ್ಲೇಜ್ ಆಗಿದೆ ಉಜಾರು ಉಳುವಾರು. ಆನ್‌ಲೈನ್‌ನಲ್ಲಿ ಅರ್ಜಿ ನೀಡಿದರೆ ಎಲ್ಲವೂ ಆನ್‌ಲೈನ್‌ನಲ್ಲೇ ಲಭಿಸುವ ದೇಶದ ಪ್ರಥಮ ವಿಲ್ಲೇಜ್ ಆಗಿ ಈ ವಿಲ್ಲೇಜ್ ಬದಲಾಗಿದೆ.

ಉಜಾರು ಉಳುವಾರು. ವಿಲ್ಲೇಜ್‌ನ ಕಿದೂರು ಕೊರತ್ತಿಮೂಲೆ ನಿವಾಸಿ ಅಬ್ದುಲ್ ರಹ್ಮಾನ್‌ರ ಪುತ್ರ ಕೆ.ಎ. ಯೂಸಫ್‌ರಿಗೆ ಪ್ರಥಮವಾಗಿ ಆನ್‌ಲೈನ್ ಮೂಲಕ ಭೂಮಿ ಹಸ್ತಾಂತರ ನಡೆಸಲಾಗಿದೆ. ಕಿದೂರು ಪೂಕಟ್ಟೆ ಬಾಪುಂಞಿಯವರಿಂದ ಭೂಮಿ ಯೂಸಫ್ ಖರೀದಿಸಿದ್ದಾರೆ. ಡಿಜಿಟಲ್ ಸರ್ವೆಯಂಗವಾಗಿ ಭೂಮಿಯ ಸ್ಕೆಚ್ ಸರ್ವೆಯಲ್ಲಿ ಈ ಹಿಂದೆಯೇ ಸಿದ್ಧಪಡಿಸಲಾಗಿತ್ತು. ನೋಂದಾವಣೆ ಇಲಾಖೆಯ ಆಧಾರ ನೋಂದಾವಣೆ ಕ್ರಮಗಳು ಆನ್‌ಲೈನ್‌ನಲ್ಲಿ ಪೂರ್ತಿಗೊಳಿಸ ಲಾಯಿತು. ಬಳಿಕ ವಿಲ್ಲೇಜ್ ಕಚೇರಿಯಿಂದ ಆನ್‌ಲೈನ್ ಆಗಿ ಹಸ್ತಾಂತರ ನಡೆಸಲಾಗಿದೆ.

ದೇಶದಲ್ಲಿ ಪ್ರಥಮವಾಗಿ ಆನ್‌ಲೈನ್ ಮೂಲಕ ಭೂಮಿ ಹಸ್ತಾಂತರ ನಡೆಸಿ ಉಜಾರು ಉಳುವಾರು  ವಿಲ್ಲೇಜ್ ಮಾದರಿಯಾಗಿದೆ. ಡಿಜಿಟಲ್ ಸರ್ವೆ ಪೂರ್ಣಗೊಳ್ಳುವ ಎಲ್ಲಾ ವಿಲ್ಲೇಜ್‌ಗಳಲ್ಲೂ ಇನ್ನು ಆನ್‌ಲೈನ್ ಆಗಿ ಭೂಮಿ ನೋಂದಾವಣೆ ನಡೆಸಲು ಸಾಧ್ಯವಿದೆ. ನೋಂದಾವಣೆ ಇಲಾಖೆಯಲ್ಲಿ ಈ ಹಿಂದೆ ಐಜಿ ಯಾಗಿದ್ದ ಹಾಗೂ ಈಗ ಕಾಸರಗೋಡು ಜಿಲ್ಲಾಧಿಕಾರಿಯಾಗಿರುವ ಕೆ. ಇಂಬಶೇಖರ್‌ರ ನಿರ್ದೇಶ ಪ್ರಕಾರ ಈ ಚಟುವಟಿಕೆಗಳನ್ನು ನಡೆಸಲಾಗಿದೆ. ಸರ್ವೆ, ನೋಂದಾವಣೆ, ಕಂದಾಯ ಇಲಾಖೆಗಳನ್ನು ಸಂಯೋಜಿಸಿ ನಡೆಸಿದ ಚಟುವಟಿಕೆಗೆ  ಜಿಲ್ಲೆಯಲ್ಲಿ ಫಲಪ್ರಾಪ್ತಿ ಲಭಿಸಿದೆ. ರಾಜ್ಯ ಸರಕಾರದ ಮಹತ್ವದ ಯೋಜನೆಯಾಗಿ ಇದನ್ನು ಜ್ಯಾರಿಗೊಳಿಸಲಾಗಿದೆ. ಇದೇ ವೇಳೆ ಈ ಸಾಧನೆ ಸಾಧಿಸಲು ನೇತೃತ್ವ ನೀಡಿದ ಸರ್ವೆ ಇಲಾಖೆ ನಿರ್ದೇಶಕ ಸಾಂಭಶಿವರಾವ್, ನೋಂದಾವಣೆ ಇಲಾಖೆ ಐಜಿ ಶ್ರೀ ಧನ್ಯ ಇವರಿಗೆ ಜಿಲ್ಲಾಧಿಕಾರಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು, ವಿಲ್ಲೇಜ್ ಅಧಿಕಾರಿಗಳು, ಸರ್ವೆ ಇಲಾಖೆ ಅಧಿಕಾರಿಗಳು ಸಹಿತ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page