ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನ ಎಗರಿಸುವ ಕಳ್ಳರ ಕಾಟ ಮತ್ತೆ ತೀವ್ರ
ಬದಿಯಡ್ಕ: ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಕಳ್ಳರ ಕಾಟ ಮತ್ತೆ ತಲೆಯೆತ್ತಿದೆ.
ಬದಿಯಡ್ಕಕ್ಕೆ ಸಮೀಪದ ಬಾರಡ್ಕ ನಿವಾಸಿ ಬೀಡಿ ಕಾರ್ಮಿಕೆ ರೋಹಿಣಿ (೫೨) ಎಂಬವರು ನಿನ್ನೆ ಬೀಡಿ ಕಂಪೆನಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹಿಂತಿರುಗಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸಿ ಬಂದ ಕಳ್ಳನೋರ್ವ ಅವರ ಕುತ್ತಿಗೆಯಲ್ಲಿದ್ದ ಮೂರುವರೆ ಪವನ್ನ ಚಿನ್ನದ ಸರ ಎಗರಿಸಿ ಪರಾರಿಯಾಗಿ ದ್ದಾನೆ. ಆಗ ಆ ಮಹಿಳೆ ಮತ್ತು ಅಲ್ಲೇ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಜೋರಾಗಿ ಬೊಬ್ಬೆ ಹಾಕಿದರೂ ಅಷ್ಟರಲ್ಲಿ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ರೋಹಿಣಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆ ಯರ ಕುತ್ತಿಗೆಯಿಂದ ಸರ ಎಗರಿಸಿದ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿದ್ದ ಆರೋಪಿಗಳ ಪೈಕಿ ಓರ್ವ ಇತ್ತೀ ಚೆಗಷ್ಟೇ ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿರು ವುದಾಗಿಯೂ ಆದ್ದರಿಂದ ರೋಹಿಣಿಯ ಚಿನ್ನದ ಸರ ಎಗರಿಸಿರುವುದರ ಹಿಂದೆ ಆತನನ್ನು ಸಂಶಯಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆ ಪರಿಸರದ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.