ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೈದ ಘಟನೆ: ಸ್ವಯಂ ಪ್ರಕರಣ ದಾಖಲಿಸಿದ ರಾಷ್ಟ್ರೀಯ ಮಾನವಹಕ್ಕು ಆಯೋಗ
ಕಾಸರಗೋಡು: ಹೊಸದುರ್ಗ ಖಾಸಗಿ ನರ್ಸಿಂಗ್ ಕಾಲೇಜೊಂದರ ತೃತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಚೈತನ್ಯ ಕುಮಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕು ಆಯೋಗ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಂಡಿದೆ.
ವಿದ್ಯಾರ್ಥಿನಿ ಆತ್ಮಹತ್ಯೆಗೈದ ಪ್ರಕರಣದ ಕುರಿತಾದ ಪೂರ್ಣ ವರದಿಯನ್ನು ನಾಲ್ಕು ವಾರದೊಳಗಾಗಿ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ನಿರ್ದೇಶ ನೀಡಿದೆ.
ನರ್ಸಿಂಗ್ ಹಾಸ್ಟೆಲ್ನಲ್ಲಿ ಅದರ ವಾರ್ಡನ್ ಮಾನಸಿಕ ಕಿರುಕುಳ ನೀಡುತ್ತಿದ್ದು, ಅದುವೇ ಚೈತನ್ಯ ಕುಮಾರಿ ಆತ್ಮಹತ್ಯೆಗೈಯ್ಯಲು ಕಾರಣವಾಗಿತ್ತೆಂಬ ಆರೋಪ ಉಂಟಾಗಿದೆ. ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚೈತನ್ಯ ಕುಮಾರಿ ಮೂರು ತಿಂಗಳ ತನಕ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದಿದ್ದರು. ಮಾರ್ಚ್ 22ರಂದು ಸಾವನ್ನಪ್ಪಿದ್ದರು. ಆ ಬಗ್ಗೆ ಪೊಲೀಸರು ಅಹಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಅದರ ತನಿಖೆ ಈಗಲೂ ಮುಂದುವರಿ ಯುತ್ತಿದೆ. ಹಾಸ್ಟೆಲ್ನ ಲ್ಲ್ಲಿರುವ ಇತರ ವಿದ್ಯಾರ್ಥಿ ಗಳಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಚೈತನ್ಯ ಕುಮಾರಿ ಹಾಸ್ಟೆಲ್ನೊಳಗೆ ನೇಣು ಬಿಗಿದುದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿದ ದಿನದಿಂದ ಊರವರು ಕ್ರಿಯಾ ಸಮಿತಿಗೂ ರೂಪು ನೀಡಿ ಹಾಸ್ಟೆಲ್ನ ವಿರುದ್ಧ ತೀವ್ರ ಹೋರಾಟವನ್ನು ನಡೆಸಿದ್ದರು. ಇದರಿಂದಾಗಿ ಪ್ರಸ್ತುತ ಹಾಸ್ಟೆಲ್ನ ವಾರ್ಡನ್ ರಜನಿಯನ್ನು ಕಾಲೇಜಿನ ಅಧಿಕೃತರು ಕೆಲಸದಿಂದ ವಜಾಗೈದಿದ್ದರು.