ನಾಗರಿಕರ ತೀವ್ರ ಒತ್ತಾಯದ ಬಳಿಕ ಆರಂಭಿಸಿದ ತಂಗುದಾಣ ನಿರ್ಮಾಣ ಅಪೂರ್ಣ
ಕುಂಬಳೆ: ಸಾರ್ವಜನಿಕರ ದೀರ್ಘ ಕಾಲದ ಬೇಡಿಕೆ ಬಳಿಕ ಕುಂಬಳೆ ಭಾಸ್ಕರನಗರದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿ ದ್ದರೂ ಅದಿನ್ನೂ ಪೂರ್ಣ ಗೊಂಡಿಲ್ಲ.
ತಂಗುದಾಣದ ಅರ್ಧ ಕೆಲಸ ಮಾತ್ರವೇ ನಡೆದಿದೆ. ಇದೇ ವೇಳೆ ನೆಲಕ್ಕೆ ಹಾಸಿದ ಟೈಲ್ಸ್ಗಳು ಕಳಚಿಕೊಳ್ಳಲು ತೊಡಗಿದೆ. ಇಲ್ಲಿ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ಈ ಪ್ರದೇಶ ಕತ್ತಲೆ ಆವರಿಸಿರುತ್ತದೆ.
ಇದೇ ವೇಳೆ ಬಸ್ ಪ್ರಯಾಣಿಕರ ತಂಗುದಾಣ ಎಂಬ ಫಲಕ ಕೂಡಾ ಸ್ಥಾಪಿಸಿಲ್ಲ. ಇದರಿಂದ ಇಲ್ಲಿ ಕೆಲವು ಬಸ್ಗಳನ್ನು ನಿಲ್ಲಿ ಸುತ್ತಿಲ್ಲವೆಂದೂ ನಾಗರಿಕರು ತಿಳಿಸುತ್ತಿದ್ದಾರೆ. ಕುಂಬಳೆ- ಮುಳ್ಳೇರಿಯ ಕೆಎಸ್ಟಿಪಿ ರಸ್ತೆ ನಿರ್ಮಾಣ ಗೊಂಡ ಬಳಿಕ ವಿವಿಧ ಸ್ಥಳಗಳಲ್ಲಿ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ಭಾಸ್ಕರನಗರದಲ್ಲಿ ತಂಗುದಾಣ ನಿರ್ಮಿಸದಿರುವುದು ನಾಗರಿಕರಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ನಾಗರಿಕರ ಒತ್ತಾಯಕ್ಕೆ ಮಣಿದು ತಂಗುದಾಣ ನಿರ್ಮಿಸಲು ಕೆಎಸ್ಟಿಪಿ ಅಧಿಕಾರಿಗಳು ಕ್ರಮ ಕೈಗೊಂಡರೂ ಅದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಳಿಸಿ ತೆರಳಿರುವುದು ಇದೀಗ ಮತ್ತೆ ಪ್ರತಿಭಟನೆಗೆ ಕಾರಣವಾಗಿದೆ.