ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಒಂದು ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿ ತರವಾಡು ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಿದೂರು ಕುಂಟಂಗೇರಡ್ಕದ ರಾಜಗೋಪಾಲ (50)ರ ಮೃತದೇಹ ಕಿದೂರು ಉಬ್ಬತ್ತೋಡಿ ಚೆಕ್‌ಪೋಸ್ಟ್ ಸಮೀಪದಲ್ಲಿರುವ ತರವಾಡು ಮನೆಯೊಳಗೆ ನಿನ್ನೆ ಮಧ್ಯಾಹ್ನ ಪತ್ತೆಯಾಗಿದೆ. ರಾಜಗೋಪಾಲ ಈ ತಿಂಗಳ ೯ರಿಂದ ನಾಪತ್ತೆಯಾಗಿದ್ದರು. ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ೧೧ರಂದು ಮನೆಯವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಮೊನ್ನೆ ರಾತ್ರಿ ತರವಾಡು ಮನೆ ಬಳಿಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರಿಗೆ ದುರ್ನಾತ ಬೀರುತ್ತಿರುವುದು ಅನುಭವಕ್ಕೆ ಬಂದಿತ್ತೆನ್ನಲಾಗಿದೆ. ಈ ಬಗ್ಗೆ ಅವರು ಪಂಚಾಯತ್ ಸದಸ್ಯ ರವಿರಾಜ್‌ಗೆ ಕರೆ ಮಾಡಿ ತಿಳಿಸಿದ್ದರು. ಇದರಂತೆ ನಿನ್ನೆ ಸ್ಥಳೀಯರು ತರವಾಡು ಮನೆಯಲ್ಲಿ ಶೋಧ ನಡೆಸಿದಾಗ ರಾಜ ಗೋಪಾಲರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಂಟಂಗೇರಡ್ಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.  ಮೃತರು ಪತ್ನಿ ಬೇಬಿ, ಮಕ್ಕಳಾದ ಮುರಳಿ, ಸಂದೀಪ್, ಸಹೋದರಿ ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page