ನಾಮಪತ್ರ ಹಿಂತೆಗೆಯಲು ಇಂದು ಕೊನೆ ದಿನ : ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಂಜೆ ಪ್ರಕಟ
ಕಾಸರಗೋಡು: ಕೇರಳದಲ್ಲಿ ಎಪ್ರಿಲ್ ೨೬ರಂದು ಲೋಕಸಭೆಗೆ ಚುನಾವಣೆ ನಡೆಯಲಿರುವಂತೆಯೇ ನಾಮಪತ್ರ ವಾಪಸು ಪಡೆಯುವ ಕ್ರಮ ಇಂದು ಅಪರಾಹ್ನ ೩ ಗಂಟೆಗೆ ಕೊನೆಗೊಳ್ಳಲಿದೆ. ಆ ಬಳಿಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದುಕೊಳ್ಳಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರ ಬರಲಿದೆ. ಇದರ ಜತೆ ಚುನಾವಣೆಗೆ ಸ್ಪರ್ಧಿಸುವ ಉಮೇದ್ವಾರರ ಚಿಹ್ನೆಯನ್ನೂ ಮಂಜೂರು ಮಾಡಲಾಗುವುದು.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೩ ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ವೇಳೆ ನಾಲ್ವರ ನಾಮಪತ್ರಗಳು ತಿರಸ್ಕರಿಸಲ್ಪಟ್ಟಿವೆ. ಯುಡಿಎಫ್ನ ರಾಜ್ಮೋಹನ್ ಉಣ್ಣಿತ್ತಾನ್, ಎಡರಂಗದ ಎಂ.ವಿ. ಬಾಲಕೃಷ್ಣನ್, ಎನ್ಡಿಎಯ ಎಂ.ಎಲ್ ಅಶ್ವಿನಿ, ಬಿಎಸ್ಪಿಯ ಎಂ. ಸುಕುಮಾರಿ, ಎಡರಂಗದ ಡಮ್ಮಿ ಉಮೇದ್ವಾರ ಸಿ.ಎಚ್. ಕುಂಞಂಬು, ಎನ್ಡಿಎ ಡಮ್ಮಿ ಉಮೇದ್ವಾರ ಎ. ವೇಲಾಯುಧನ್ ಮತ್ತು ಪಕ್ಷೇತರರಾದ ಕೆ.ಆರ್. ರಾಜೇಶ್ವರಿ, ಅನೀಶ್ ಪಯ್ಯನ್ನೂರು, ಟಿ. ಅನೀಶ್ ಕುಮಾರ್, ಕೇಶವ ನಾಯ್ಕ್, ಚಾಲಕೃಷ್ಣನ್ ಚೆಮ್ಮಂಚೇರಿ, ಎನ್. ಬಾಲಕೃಷ್ಣನ್ ಮತ್ತು ಕೆ. ಮನೋಹರನ್ರ ನಾಮಪತ್ರಗಳು ಸೂಕ್ಷ್ಮ ಪರಿಶೀಲನೆಯಲ್ಲಿ ಪುರಸ್ಕೃತಗೊಂಡಿದೆ. ಈ ಪೈಕಿ ಎನ್ ಡಿಎ ಮತ್ತು ಎಡರಂಗದ ಡಮ್ಮಿ ಅಭ್ಯರ್ಥಿಗಳು ಇಂದು ನಾಮಪತ್ರ ಹಿಂv ಗೆದುಕೊಳ್ಳಲಿದ್ದಾರೆ. ಇನ್ನು ಪಕ್ಷೇತರರ ಪೈಕಿ ಯಾರು ನಾಮಪತ್ರ ಹಿಂತೆಗೆದು ಕೊಳ್ಳುವರೆಂಬುವುದು ಇಂದು ಸಂಜೆ ೩ಗಂಟೆಗೆ ಸ್ಪಷ್ಟಗೊಳ್ಳಲಿದೆ. ಆ ಮೂಲಕ ಅಂತಿಮ ಸ್ಪರ್ಧಾ ಕಣದಲ್ಲಿರುವ ಉಮೇದ್ವಾರರ ಚಿತ್ರಣವೂ ಹೊರಬರಲಿದೆ.
ಈ ತಿಂಗಳ ೨೬ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೪,೫೨,೨೩೦ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದಾರೆ.