ನೀರು ತರಲು ಹೋದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ನೀರು ತರಲು ಹೋದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಪೈಕ ಮಣವಾಟಿ ಮಖಾಂ ಬಳಿ ನಿವಾಸಿ ಹಸೈನಾರ್ ಎಂಬವರ ಪತ್ನಿ ಮೈಮೂನ (43) ಸಾವನ್ನಪ್ಪಿದ ಮಹಿಳೆ. ಮನೆ ಪಕ್ಕದ ಬಾವಿಯ ನೀರು ಕಲುಷಿತವಾಗಿರುವ ಹಿನ್ನೆಲೆಯಲ್ಲಿ ಮೈಮೂನ ಅಲ್ಪ ದೂರದಲ್ಲಿರುವ ಬಾವಿಯಿಂದ ನೀರು ತರಲು ನಿನ್ನೆ ಬೆಳಿಗ್ಗೆ ಹೋಗಿದ್ದರು. ತಡವಾದರೂ ಮನೆಗೆ ಹಿಂತಿರುಗದಾಗ ಮನೆಯವರು ಶೋಧ ಆರಂಭಿಸಿದಾಗ ಬಾವಿ ಬಳಿ ನೀರಿನ ಪಾತ್ರ ಪತ್ತೆಯಾಗಿದೆ. ಇದರಿಂದ ಶಂಕೆಗೊಂಡು ಬಾವಿಯಲ್ಲಿ ನೋಡಿದಾಗ ಅದರಲ್ಲಿ ಮೈಮೂನ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ಬಗ್ಗೆ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ಆಂಡ್ ರೆಸ್ಕ್ಯೂ ಆಫೀಸರ್ ಸತೀಶನ್ ನೇತೃತ್ವದಲ್ಲಿ ಅಗ್ನಿಶಾಮಕದಳದ ಇತರ ಸಿಬ್ಬಂದಿಗಳಾದ ಉಮೇಶನ್ ಎಚ್, ಸಿರಾಜುದ್ದೀನ್, ಸತೀಶ್ ಕೆ,ಚಾಲಕ ಪ್ರಸೀದ್ ಇ ಮತ್ತು ಹೋಮ್ಗಾರ್ಡ್ ಶೋಭಿನ್ ಎಂಬಿವರನ್ನೊಳಗೊಂಡ ಕಾಸರಗೋಡು ಅಗ್ನಿಶಾಮಕದಳ ಘಟನೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ನಂತರ ಆಂಬುಲೆನ್ಸ್ನಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.
ಹಸೈನಾರ್-ಆಯಿಷಾ ದಂಪತಿಯ ಪುತ್ರಿಯಾದ ಮೈಮೂನಾ ಪತಿಯ ಹೊರತಾಗಿ ಮಕ್ಕಳಾದ ಅಬೂಬಕರ್ ಸಿದ್ದಿಕ್, ಸಾಬಿತ್, ಸಾಕೀರ್,ಶಹಾನಾ, ಫಾತಿಮಾ, ಸಹೋದರ-ಸಹೋದರಿಯರಾದ ಮೊಹಮ್ಮದ್ ಶರೀಫ್,ಸಾರಾ, ನಿಸಾ, ನಸೀಮಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.