ನೆರೆಮನೆಯ ಛಾವಡಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಅಡೂರು: ಕೂಲಿ ಕಾರ್ಮಿಕನಾದ ಯುವಕ ನೆರೆಮನೆಯ ಛಾವಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಬಳಿಯ ಉರುಡೂರು ಚಂದನಕ್ಕಾಡ್ ಹೌಸ್‌ನ ದಿ| ಕುಂಞಿಕಣ್ಣನ್- ದಿ| ಮಾಧವಿ ದಂಪತಿಯ ಪುತ್ರ ಸತೀಶ್ ಟಿ. ಯಾನೆ ಬಿಜು (46) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಇವರು ಹಾಗೂ ಸಹೋದರಿ ಸೌಮಿನಿ ಮಾತ್ರವೇ ವಾಸಿಸುತ್ತಿದ್ದರು. ಸೌಮಿನಿ ನಿನ್ನೆ ಕೆಲಸಕ್ಕೆ ತೆರಳಿದ್ದು, ಸಂಜೆ ೫ ಗಂಟೆಗೆ ಮನೆಗೆ ಬಂದಾಗ ಸತೀಶ್ ಮನೆಯಲ್ಲಿರಲಿಲ್ಲ. ಇದರಿಂದ ನೆರೆಮನೆಗೆ ತೆರಳಿ ನೋಡಿದಾಗ ಅಲ್ಲಿ ಛಾವಡಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಸತೀಶ್ ಪತ್ತೆಯಾಗಿದ್ದಾರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ಈ ವೇಳೆ ಸಾವಿಗೆ ಕಾರಣ ತಿಳಿದು ಬರಲಿದೆ. ಘಟನೆ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page