ಬದಿಯಡ್ಕ-ಏತಡ್ಕ- ಸುಳ್ಯಪದವು ರಸ್ತೆ ಮಧ್ಯೆ ಮಣ್ಣು ರಾಶಿ: ತೆರವಿಗೆ ಕ್ರಮವಿಲ್ಲ; ಸಂಚಾರ ಸಮಸ್ಯೆ
ಏತಡ್ಕ: 24 ವರ್ಷಗಳಿಂದ ದುರಸ್ತಿ ನಡೆಸದ, ಶೋಚನೀಯಗೊಂಡಿದ್ದ ಬದಿಯಡ್ಕ-ಏತಡ್ಕ- ಸುಳ್ಯಪದವು ರಸ್ತೆಗಾಗಿ ಗೋಗರೆದ ಸ್ಥಳೀಯರ ಚಳವಳಿಯಿಂದ 2022ರಲ್ಲಿ ರಸ್ತೆ ದುರಸ್ತಿಗೊಳಿಸಿ ಸುಗಮಗೊಳಿಸಿದಾಗ ಅದೇ ರಸ್ತೆಯಲ್ಲಿ ಈಗ ಬರೆ ಜರಿದು ಬಿದ್ದು ಸಂಚಾರ ಸಮಸ್ಯೆಯಾಗುತ್ತಿದೆ. ಬದಿಯಡ್ಕ- ಸುಳ್ಯಪದವು ರಸ್ತೆಯ ಏತಡ್ಕ ಹಾಗೂ ಬೀಜದಕಟ್ಟೆ ಮಧ್ಯೆ ವಿವಿಧ ಕಡೆ ಬರೆ ಕುಸಿದು ಮಣ್ಣು ರಸ್ತೆಗೆ ಬಿದ್ದು ತಿಂಗಳಾಗುತ್ತಾ ಬಂದರೂ ಮಣ್ಣನ್ನು ತೆರವುಗೊಳಿಸಲು ಕ್ರಮವುಂಟಾಗಿಲ್ಲ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಮಣ್ಣು ಬಿದ್ದು ವಾಹನಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಇದು ಅಪಘಾತಕ್ಕೂ ಕಾರಣವಾಗಲಿದೆ. ಏತಡ್ಕ- ಕಿನ್ನಿಂಗಾರು ಮಧ್ಯೆ ಕೂಟೇಲುನಲ್ಲಿ ರಸ್ತೆಯ ಇಕ್ಕಡೆಗಳಲ್ಲೂ ಬರೆ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ಇದರಿಂದ ರಸ್ತೆಯ ಅರ್ಧದಷ್ಟು ಭಾಗ ಮುಚ್ಚಿದೆ. ಶಾಂತಿಯಡಿ ಮತ್ತು ಅನೋವುತ್ತಡ್ಕ ಮಧ್ಯೆ ಎರಡು ಕಡೆ ರಸ್ತೆಗೆ ಬರೆ ಕುಸಿದು ಬಿದ್ದಿದೆ.
ಶೋಚನೀಯಗೊಂಡಿದ್ದ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ 2016ರ ಜನವರಿ 20ರಂದು ಲೋಕೋಪಯೋಗಿ ಇಲಾಖೆಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿತ್ತು. ಬಳಿಕ ವಿವಿಧ ರೀತಿಯ ಚಳವಳಿ, ಪ್ರತಿಭಟನೆ ಹಾಗೂ ತಿರುವನಂತಪುರದಲ್ಲಿ ವಿವಿಧ ಪಕ್ಷಗಳ ನೇತೃತ್ವದಲ್ಲಿ ಅಳು ಚಳವಳಿ ನಡೆಸಿ ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ 35.83 ಕೋಟಿ ರೂ. ಕಿಫ್ಬಿ ಹಣವನ್ನು ಉಪಯೋಗಿಸಿ ರಸ್ತೆ ನವೀಕರಣ ಕಾಮಗಾರಿ ಆರಂಭಿಸಲಾಗಿತ್ತು. 2022ರಲ್ಲಿ ಕಾಮಗಾರಿ ಪೂರ್ತಿಗೊಂಡು ವ್ಯವಸ್ಥಿತ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಬಿಟ್ಟುಕೊಡಲಾಗಿತ್ತು. ಕೆಲವು ಕಡೆಗಳಲ್ಲಿ ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿ ರುವುದರಿಂದಾಗಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ನೇರಪ್ಪಾಡಿ ಸೇತುವೆ ಹಾಗೂ ಏತಡ್ಕ ಮಧ್ಯೆಗಿನ ಕಡೆಕ್ಕಳ ಎಂಬಲ್ಲಿ ಚರಂಡಿಯ ಸ್ಲ್ಯಾಬ್ ಮುರಿದು ಅಪಾಯಭೀತಿ ಉಂಟಾಗಿದೆ. ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸುವ್ಯವಸ್ಥಿತ ರಸ್ತೆ ಲಭಿಸಿದರೂ ಮಣ್ಣು ಜರಿದ ಬಿದ್ದು ರಸ್ತೆ ಸಂಚಾರದಲ್ಲಿ ಸಮಸ್ಯೆ ಉಂಟಾಗುತ್ತಿ ರುವುದನ್ನು ಕೊನೆಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.