ಮದ್ಯ, ಮಾದಕವಸ್ತು ಸಾಗಾಟ ತೀವ್ರಗೊಂಡಿರುವಾಗಲೇ ಗಡಿ ಪ್ರದೇಶದ ಅಬಕಾರಿ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಇಲ್ಲ: ಕಚೇರಿ ಪರಿಸರದಲ್ಲಿ ತುಂಬಿ ತುಳುಕುತ್ತಿರುವ ವಾಹನಗಳು
ಕುಂಬಳೆ: ಮದ್ಯ, ಮಾದಕವಸ್ತುಗಳ ಸಾಗಾಟ ತೀವ್ರಗೊಂಡಿರುವಾಗ ಅದನ್ನು ತಡೆಯಲು ಹಾಗೂ ವಶಪಡಿಸಲು ಏರ್ಪಡಿಸಲಾದ ಅಬಕಾರಿ ವ್ಯವಸ್ಥೆಗೆ ಗಡಿ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣ ವಾಗಿದೆ. ನೆರೆ ರಾಜ್ಯಗಳ ಮೂಲಕ ಜಿಲ್ಲೆಗೆ ಮದ್ಯ ಸಹಿತ ಮಾದಕವ ಸ್ತುಗಳು ಯಾವುದೇ ತಡೆಯಿಲ್ಲದೆ ವ್ಯಾಪಕ ಸಾಗಾಟವಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾದಕವಸ್ತು ವ್ಯಾಪಾರ ತೀವ್ರಗೊಳ್ಳುತ್ತದೆ. ಈ ಸಮಯದಲ್ಲೇ ಅಬಕಾರಿ ಕುಂಬಳೆ ರೇಂಜ್ ಇನ್ಸ್ಪೆ ಕ್ಟರ್ರನ್ನು ವರ್ಗಾಯಿಸಲಾಗಿದೆ. ಈ ಹಿಂದೆ ಆರು ತಿಂಗಳ ಕಾಲ ಇಲ್ಲಿ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್ ಮಾದಕವಸ್ತು ಸಾಗಾಟವಾಗುವ ದಾರಿಗಳ ಕುರಿತು ಪೂರ್ಣವಾಗಿ ತಿಳಿದುಕೊಂಡು ಅದರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಇದು ಮಾದಕವಸ್ತು ಲೋಬಿಗಳಿಗೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಈ ಮಧ್ಯೆ ಒಂದು ತಿಂಗಳಹಿಂದೆ ಇನ್ಸ್ಪೆಕ್ಟರ್ರನ್ನು ಇಲ್ಲಿಂದ ವರ್ಗಾಯಿಸಲಾಗಿದೆ. ಆದರೆ ಇನ್ಸ್ಪೆಕ್ಟರ್ರನ್ನು ವರ್ಗಾಯಿಸಲು ತೋರಿಸಿದ ಆಸಕ್ತಿಯನ್ನು ಹೊಸ ನೇಮಕಾತಿಯಲ್ಲಿ ಮೇಲಧಿಕಾರಿಗಳು ತೋರಿಸಿಲ್ಲವೆಂದು ದೂರಲಾಗಿದೆ. ಇದೇ ವೇಳೆ ಇನ್ನು ಹೊಸ ಇನ್ಸ್ಪೆಕ್ಟರ್ರನ್ನು ಇಲ್ಲಿ ನೇಮಿಸಿದರೂ ಅವರಿಗೆ ಕಚೇರಿಗೆ ತೆರಳಲು ಸಾಧ್ಯವಾಗದ ಸ್ಥಿತಿ ಇದೆಯೆಂದು ಹೇಳಲಾಗುತ್ತಿದೆ. ಮದ್ಯ ಹಾಗೂ ಮಾದಕವಸ್ತುಗಳ ಸಹಿತ ವಶಪಡಿಸಲಾದ ವಾಹನಗಳು ಕಚೇರಿ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿದೆ. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸ್ಥಳ ಸೌಕರ್ಯವಿಲ್ಲ. ಮಾದಕವಸ್ತು ತಂಡದಿಂದ ವಾಹನದ ಬೆಲೆ ವಸೂಲಿಮಾಡಿ ಅವರಿಗೆ ವಾಹನ ಬಿಟ್ಟುಕೊಡಲು ಕ್ರಮವಿಲ್ಲ. ಆದ್ದರಿಂದ ವಾಹನಗಳು ಅಲ್ಲಿಯೇ ನಾಶಗೊಳ್ಳುತ್ತಿದ್ದು, ಇದರಿಂದ ಖಜಾನೆ ಖಾಲಿಯಾಗಿರುವ ಸರಕಾರಕ್ಕೆ ಯಾವುದೇ ಪ್ರಯೋಜನವಿಲ್ಲದಾಗಿದೆ.