ಮೀಪುಗುರಿ ತಿರುವಿನಲ್ಲಿ ಕಟ್ಟಿ ನಿಂತ ನೀರು: ಸಂಚಾರ ಸಮಸ್ಯೆ
ಕಾಸರಗೋಡು: ಕರಂದಕ್ಕಾಡು- ಮಧೂರು ರಸ್ತೆಯ ಮೀಪುಗುರಿ ತಿರುವಲ್ಲಿ ನೀರು ಸಂಗ್ರಹಗೊಂಡು ವಾಹನಗಳ ಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಲಾಗಿದೆ. ಇಲ್ಲಿ ಚರಂಡಿ ಇದ್ದರೂ ಮಣ್ಣು ಕಸಕಡ್ಡಿ ತುಂಬಿಕೊಂಡು ಶುಚಿಗೊಳಿಸದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ಇಲ್ಲಿ ನೀರು ಕಟ್ಟಿ ನಿಲ್ಲಲು ಕಾರಣವೆನ್ನಲಾಗಿದೆ.
ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಈಗ ಸಾರ್ವಜನಿಕರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ವಾಹನಗಳು ಸಂಚರಿಸುವಾಗ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ಅಪಘಾತ ಭೀತಿ ನೆಲೆಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದು, ಕೂಡಲೇ ಚರಂಡಿಯನ್ನು ಶುಚಿಗೊಳಿಸಿ ಮಳೆನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.