ರೈಲು ಪ್ರಯಾಣಿಕನ ನಗದು ಒಳಗೊಂಡ ಬ್ಯಾಗ್ ಕಳವು: ರೈಲ್ವೇ ಸಿಬ್ಬಂದಿ ಸೆರೆ
ಕಾಸರಗೋಡು: ರೈಲ್ವೇ ಪ್ರಯಾಣಿಕನ ಹಣ ಹಾಗೂ ದಾಖಲೆ ಪತ್ರಗಳಿದ್ದ ಬ್ಯಾಗ್ ಕಳವುಗೈದ ರೈಲ್ವೇ ನೌಕರನನ್ನು ಬಂಧಿಸಲಾಗಿದೆ. ಬಿಹಾರ ನಾರಾಯಣ್ಪುರ್ ನಿವಾಸಿಯೂ ಟ್ರ್ಯಾಕ್ ಮ್ಯಾನ್ ಆಗಿರುವ ಸುಬೋದ್ ಕುಮಾರ್ ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ನೆಲ್ಲಿಕುಂಜೆ ಬೀಚ್ ರಸ್ತೆಯ ಅಶೋಕ್ ಶೆಟ್ಟಿ (48) ಎಂಬವರ ಬ್ಯಾಗ್ ಕಳವಿಗೀಡಾಗಿತ್ತು. ಅಶೋಕ್ ಶೆಟ್ಟಿ ಚಂಡೀಘಡದಿಂದ ಕೊಚ್ಚುವೇಳಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಈ ತಿಂಗಳ ೧೮ರಂದು ಮುಂಜಾನೆ 2 ಗಂಟೆಗೆ ಇಳಿಯುತ್ತಿದ್ದ ವೇಳೆ 59೦೦ ರೂ. ಹಾಗೂ ಇತರ ಸಾಮಗ್ರಿಗಳು ಒಳಗೊಂಡ ಅವರ ಬ್ಯಾಗ್ನ್ನು ಕಳವುಗೈಯ್ಯಲಾಗಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಕಾಸರಗೋಡು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ನಂತರ ರೈಲು ನಿಲ್ದಾಣದ ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಿದಾಗ ಆ ಬ್ಯಾಗನ್ನು ರೈಲ್ವೇ ಇಲಾಖೆ ಸಿಬ್ಬಂದಿಯಾಗಿರುವ ಸುಬೋದ್ ಕುಮಾರ್ ಎಂಬಾತ ಸಾಗಿಸುತ್ತಿರುವ ದೃಶ್ಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.