ವಾಹನ ಅಪಘಾತ: ತನಿಖೆಗೆ ಹೋದ ಎಸ್ಐಗಳ ಮೇಲೆ ಹಲ್ಲೆ; ಆರೋಪಿ ಸೆರೆ
ಕಾಸರಗೋಡು: ವಾಹನ ಅಪಘಾ ತದ ಬಗ್ಗೆ ತನಿಖೆ ನಡೆಸಲು ಹೋದ ಎಸ್ಐಗಳ ಮೇಲೆ ಹಲ್ಲೆ ನಡೆಸಿ ಅವರ ಕರ್ತವ್ಯಕ್ಕೆ ಅಡಚಣೆ ಉಂಟುಮಾಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಪನತ್ತಡಿ ಚಾಮುಂಡಿಕುನ್ನುನ ಪ್ರಮೋದ್ ಎಸ್.ಸಿ (46) ಬಂಧಿತ ಆರೋಪಿ. ಚೆರ್ಕಳದಲ್ಲಿ ನಿನ್ನೆ ಸಂಜೆ ಆರೋಪಿ ಚಲಾಯಿಸುತ್ತಿದ್ದ ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಲ್ಲಿ ಸ್ಕೂಟರ್ ಸವಾರ ಕುಂಟಾರು ಪಡಿಯತ್ತಡ್ಕದ ಇಬ್ರಾಹಿಂ ಬಿನ್ಶಾದ್ (19)ಗಾಯಗೊಂಡು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಈ ಅಪಘಾತದ ಬಗ್ಗೆ ತನಿಖೆ ನಡೆಸಲು ವಿದ್ಯಾಗರ ಠಾಣೆ ಎಸ್ಐಗಳಾದ ಪ್ರದೀಶ್ ಮತ್ತು ಉಮೇಶ್ ಘಟನೆ ನಡೆದ ಸ್ಥಳಕ್ಕೆ ಹೋದಾಗ ಅವರೊಂದಿಗೆ ಢಿಕ್ಕಿ ಹೊಡೆದ ಕಾರು ಚಾಲಕ ಪ್ರಮೋದ್ ವಾಗ್ವಾದದಲ್ಲಿ ತೊಡಗಿ ನಂತರ ಆತ ಎಸ್ಐಗಳ ಮುಖ ಮತ್ತು ದೇಹಕ್ಕೆ ಹೊಡೆದು ಹಲ್ಲೆ ನಡೆಸಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ ನೆಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಎಸ್ಐ ಪ್ರದೀಶ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಅದಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಬಂಧಿತ ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಇತರ ಹಲವು ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಲಾಯಿಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.