ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಯುವತಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಉಪತಹಶೀಲ್ದಾರ್ ಅಮಾನತು; ಆರೋಪಿಗೆ ಸರಕಾರಿ ಸೇವೆಯಲ್ಲಿ ಮುಂದುವರಿಯಲು ಅರ್ಹತೆ ಇಲ್ಲ-ಸರಕಾರಕ್ಕೆ ವರದಿ ಸಲ್ಲಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪತ್ತನಂತಿಟ್ಟ ನಿವಾಸಿ ನರ್ಸ್ ಆಗಿರುವ ರಂಜಿತಾ ಜಿ. ನಾಯರ್ ಬಗ್ಗೆ ಸೋಶ್ಯಲ್ ಮೀಡಿಯಾದಲ್ಲಿ ಅವಹೇಳನಕಾರಿ ರೀತಿಯ ವಾಕ್ಯ ಬಳಸಿ ಪೋಸ್ಟ್ ಮಾಡಿದ ವೆಳ್ಳರಿಕುಂಡ್ ತಾಲೂಕು ಕಚೇರಿಯ ಉಪ ತಹಶೀಲ್ದಾರ್ (ಜ್ಯೂನಿಯರ್ ಸುಪರಿನ್‌ಟೆಂಡೆಂಟ್) ಮೂಲತಃ ಹೊಸದುರ್ಗ ಮಾವುಂಗಾಲ್ ನಿವಾಸಿ ಹಾಗೂ ಈಗ ನೀಲೇಶ್ವರ ತೀರ್ಥಂಗಯದಲ್ಲಿ ವಾಸಿಸುತ್ತಿರುವ ಎ. ಪವಿತ್ರನ್ (53)ರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಿ.ಎಸ್.ಎಸ್‌ನ 75, 79, 67 (ಎ) ಸೆಕ್ಷನ್‌ಗಳ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನಂತರ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮಾತ್ರವಲ್ಲ ಇವರನ್ನು  ಸರಕಾರಿ ಸೇವೆಯಿಂದಲೂ ಅಮಾನತುಗೊಳಿಸಲಾಗಿದೆ.

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ರಂಜಿತಾ ಜಿ. ನಾಯರ್ ವಿರುದ್ಧ ಪವಿತ್ರನ್  ಸಾಮಾಜಿಕ ಜಾಲತಾಣದಲ್ಲಿ  ಅವಹೇಳನಕಾರಿ ರೀತಿಯ ಕಮೆಂಟ್ಸ್ ಮಾಡಿದ್ದರು. ಅದರ ಕೆಲವೇ ತಾಸುಗಳಲ್ಲಿ ಅದರ ವಿರುದ್ಧ ವ್ಯಾಪಕ ಆಕ್ರೋಶಗಳು ಭುಗಿಲೆದ್ದಿತ್ತು. ಅಂತಹ ಅವಹೇಳನಕಾರಿ ಪೋಸ್ಟ್ ಮಾಡಿದ ಪವಿತ್ರನ್ ವಿರುದ್ಧ ಎನ್.ಎಸ್.ಎಸ್ ತಾಲೂಕು ಯೂನಿಯನ್  ಅಧ್ಯಕ್ಷ ಕೆ. ಪ್ರಭಾಕರನ್ ನಾಯರ್ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಪವಿತ್ರನ್ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪವಿತ್ರನ್ ಅವಹೇಳನಕಾರಿ ಪೋಸ್ಟ್ ಮಾಡಿದ ಬಗ್ಗೆ ಜಿಲ್ಲಾಧಿಕಾರಿ ಕಂದಾಯ ಸಚಿವರಿಗೆ ತಕ್ಷಣ ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ಸಚಿವರು ನೀಡಿದ ನಿರ್ದೇಶ ಪ್ರಕಾರ ಪವಿತ್ರನ್‌ರನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪವಿತ್ರನ್ ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆಯೂ ಹಲವು ಬಾರಿ ಅವಹೇಳನಕಾರಿ ರೀತಿಯ ಪೋಸ್ಟ್   ಮಾಡಿದ್ದರು. ಆಬಗ್ಗೆ ಅವರಿಗೆ ಈ ಹಿಂದೆ ಹಲವು ಬಾರಿ ತಾಕೀತನ್ನು ನೀಡಲಾಗಿತ್ತು. ಮಾತ್ರವಲ್ಲ ಶಿಸ್ತುಕ್ರಮವನ್ನು ಕೈಗೊಳ್ಳಲಾಗಿತ್ತು. ಅದಾಗ್ಯೂ  ಸೋಶಿಯಲ್ ಮೀಡಿಯಾದಲ್ಲಿ   ಅವಹೇಳನಕಾರಿ  ಕಮೆಂಟ್‌ಗಳನ್ನು ನೀಡುತ್ತಿರುವುದನ್ನು ಪವಿತ್ರನ್ ಇನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಸರಕಾರಿ ಸೇವೆಯಲ್ಲಿ ಮುಂದುವರಿಯಲು ಅನರ್ಹರೆಂದೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಪವಿತ್ರನ್ ಈ ಹಿಂದೆ ಶಾಸಕ ಇ ಚಂದ್ರಶೇಖರನ್ ವಿರುದ್ಧವೂ ಇದೇ ರೀತಿ ಅವಹೇಳನಕಾರಿ ರೀತಿಯ ಪೋಸ್ಟ್ ಮಾಡಿದ್ದರು. ಅದರ ಹೆಸರಲ್ಲಿ ಪವಿತ್ರನ್‌ರನ್ನು 2024 ಸೆಪ್ಟಂಬರ್ 18ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತು ಸಮಯ ಮುಗಿದ ಬಳಿಕ ಅವರನ್ನು ನವಂಬರ್ 7ರಂದು ಮತ್ತೆ ಸರಕಾರಿ ಸೇವೆಯಲ್ಲಿ ಮುಂದುವರಿದ್ದರು.

Leave a Reply

Your email address will not be published. Required fields are marked *

You cannot copy content of this page