ವಿವಿಧ ಬೇಡಿಕೆ ಮುಂದಿಟ್ಟು ಆಟೋರಿಕ್ಷಾ ಮಜ್ದೂರ್ ಸಂಘದಿಂದ ಕುಂಬಳೆ ಪಂಚಾಯತ್ ಕಚೇರಿ ಮಾರ್ಚ್
ಕುಂಬಳೆ: ಕಂಚಿಕಟ್ಟೆ ಸೇತುವೆ ಮೂಲಕ ಸಂಚಾರ ಮೊಟಕುಗೊಳಿಸಿ ವರ್ಷ ಕಳೆದರೂ ಪಿಡಬ್ಲ್ಯುಡಿ ಹಾಗೂ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ, ಕುಂಬಳೆಯಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಭರವಸೆ ನೀಡಿ ಜನರನ್ನು ವಂಚಿಸಿದ ಪಂಚಾಯತ್ ಅಧಿಕಾರಿಗಳ ವಿರುದ್ಧ, ಪಂಚಾಯತ್ ವ್ಯಾಪ್ತಿಯ ಹಲ ವಾರು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದನ್ನು ಪ್ರತಿಭಟಿಸಿ, ಕುಂಬಳೆ ಪೇಟೆಯಿಂದ ಕಡಪ್ಪುರ ಭಾಗಕ್ಕೆ ತೆರಳುವವರಿಗಾಗಿ ರೈಲ್ವೇ ಸ್ಟೇಷನ್ ಹತ್ತಿರ ನಿರ್ಮಿಸಿದ ಅಂಡರ್ ಪಾಸ್ನಲ್ಲಿ ನೀರು ತುಂಬಿ ವಾಹನ ಸಂಚಾರ ಅಸಾಧ್ಯವಾಗುತ್ತಿರುವುದನ್ನು ಪ್ರತಿಭಟಿಸಿ ಬಿಎಂಎಸ್ ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಯೂನಿಟ್ ವತಿಯಿಂದ ಪಂಚಾಯತ್ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು.
ಕುಂಬಳೆಯಲ್ಲಿ ನಿರಂತರವಾಗಿ ಯಾವುದೇ ಮಾನದಂಡವಿಲ್ಲದೆ ಆಟೋರಿಕ್ಷಾ ಪರ್ಮಿಟ್ ನೀಡುವು ದನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಶುಭ ಕೋರಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಕುಂಬಳೆ ವಲಯ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ ಮುಗು, ಬಾಬುಮೋನ್ ಚೆರ್ಕಳ, ಲೋಕೇಶ್ ಬಾಡೂರು, ಗಣೇಶ್ ಮುಳಿಯಡ್ಕ, ರಂಜಿತ್ ಚೆರ್ಕಳ, ದಿವಾಕರ ರೈ ಬಂಬ್ರಾಣ ಹಾಗೂ ವಿವಿಧ ಪರಿವಾರ ಸಂಘಟನೆ ಮುಖಂಡರು ಭಾಗವಹಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘ ಘಟಕಾಧ್ಯಕ್ಷ ಕೃಷ್ಣ ಪಿ.ಕೆ. ಅಧ್ಯಕ್ಷತೆ ವಹಿಸಿದ್ದು, ಭೋಜರಾಜ ಬೆಜಪ್ಪೆ ಸ್ವಾಗತಿಸಿದರು. ಶಿವಾನಂದ ರಾವ್ ವಂದಿಸಿದರು.