ವ್ಯಾಪಾರ ಸಂಸ್ಥೆಯ ಗೋದಾಮಿಗೆ ಕಿಚ್ಚಿಟ್ಟ ಆರೋಪಿ ನ್ಯಾಯಾಲಯದಲ್ಲಿ ಶರಣು
ಬದಿಯಡ್ಕ: ಸಿಗರೇಟ್, ಸೋಡಾ ಸಾಲವಾಗಿ ನೀಡದ ದ್ವೇಷದಿಂದ ವ್ಯಾಪಾರ ಸಂಸ್ಥೆಯ ಗೋದಾಮಿಗೆ ಬೆಂಕಿ ಹಚ್ಚಿ ನಾಶನಷ್ಟವುಂಟುಮಾಡಿದ್ದ ಪ್ರಕರಣದ ಆರೋಪಿ ನ್ಯಾಯಾಲಯ ದಲ್ಲಿ ಶರಣಾಗಿದ್ದಾನೆ. ಕನ್ಯಪ್ಪಾಡಿ ಬಳಿಯ ತಲ್ಪನಾಜೆ ಎಂಬಲ್ಲಿನ ಸಂತು ಯಾನೆ ಸಂತೋಷ್ ಎಂಬಾತ ನ್ಯಾಯಾಲಯ ದಲ್ಲಿ ಶರಣಾಗಿದ್ದು, ಈತನಿಗೆ ನ್ಯಾಯಾ ಲಯ 14 ದಿನಗಳ ರಿಮಾಂಡ್ ವಿಧಿ ಸಿದೆ. ಈ ತಿಂಗಳ ೧೪ರಂದು ರಾತ್ರಿ ಕನ್ಯಪ್ಪಾಡಿಯಲ್ಲಿರುವ ಜೆ.ಕೆ. ಬೇಕರ್ಸ್ ಹಾಗೂ ಜೆ.ಕೆ. ಅರೇಂಜರ್ಸ್ ಎಂಬ ವ್ಯಾಪಾರ ಸಂಸ್ಥೆಗಳ ಗೋದಾಮಿಗೆ ಆರೋಪಿ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟಿದ್ದ ನೆನ್ನ ಲಾಗಿದೆ. ಇದರಿಂದ ಸುಮಾರು 4 ಲಕ್ಷ ರೂಪಾಯಿಗಳ ಸಾಮಗ್ರಿಗಳು ಉರಿದು ನಾಶಗೊಂಡಿರುವುದಾಗಿ ವ್ಯಾಪಾರ ಸಂಸ್ಥೆಯ ಮಾಲಕ ಕುಂಟಿಕಾನದ ಲ್ಯಾನ್ಸರ್ ಡಿ’ಸೋಜಾ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಸಂತೋಷ್ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆರೋಪಿ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.
14ರಂದು ಮಧ್ಯಾಹ್ನ ಜೆ.ಕೆ. ಬೇಕರ್ಸ್ಗೆ ಬಂದ ಸಂತೋಷ್ ಸಾಲವಾಗಿ ಸಿಗರೇಟ್ ಹಾಗೂ ಸೋಡಾ ಕೇಳಿದ್ದನೆನ್ನಲಾಗಿದೆ. ಆದರೆ ಸಾಲವಾಗಿ ಅವುಗಳನ್ನು ನೀಡಲಿಲ್ಲವೆನ್ನಲಾಗಿದೆ. ಇದರ ದ್ವೇಷದಿಂದ ಅಂದು ರಾತ್ರಿ ಅಂಗಡಿಯಿಂದ 200 ಮೀಟರ್ ದೂರದಲ್ಲಿರುವ ಗೋದಾಮಿಗೆ ಸಂತೋಷ್ ಬೆಂಕಿ ಹಚ್ಚಿರುವುದಾಗಿ ದೂರಲಾಗಿದೆ. ಆರೋಪಿಯನ್ನು ಕಸ್ಟಡಿಗೆ ತೆಗೆದು ಮಾಹಿತಿ ಸಂಗ್ರಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.