ಶಾಲೆಗಳು ಸೋಮವಾರದಿಂದ ಕಾರ್ಯಾರಂಭ: ಪ್ರವೇಶೋತ್ಸವಕ್ಕೆ ಸಕಲ ಸಿದ್ಧತೆ
ಕಾಸರಗೋಡು: ರಾಜ್ಯದಲ್ಲಿ ಜೂನ್ ೩ರಂದು ಶಾಲೆಗಳು ತೆರೆದು ಕಾರ್ಯಾಚರಣೆ ಆರಂಭಿಸಲಿವೆ. ಜಿಲ್ಲಾ ಮಟ್ಟದ ಪ್ರವೇಶೋತ್ಸವ ಕೋಡೋತ್ ಡಾ. ಅಂಬೇಡ್ಕರ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಪ್ರವೇಶೋತ್ಸವಕ್ಕೆ ಬೇಕಾದ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.
ಇದೇ ವೇಳೆ ಜಿಲ್ಲೆಯ ಎಲ್ಲಾ ಸರಕಾರಿ, ಐಡೆಡ್, ಅನ್ ಐಡೆಡ್ ಶಾಲೆಗಳಿಗೆ ಎಇಒ, ಡಿಇಒ, ಡಿಡಿಇ ಎಂಬಿವರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಶಾಲೆಗಳಲ್ಲಿ ಸುರಕ್ಷತೆ ಕುರಿತು ಅವಲೋಕನ ನಡೆಸಿದರು. ಶಾಲೆಯ ತರಗತಿ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಮೊದಲಾದವುಗಳನ್ನು ನೇರವಾಗಿ ವೀಕ್ಷಿಸಿ, ಶುಚಿತ್ವವನ್ನು ಖಾತರಿಪಡಿಸಿದರು. ತರಗತಿ ಕೊಠಡಿ, ಬೆಂಚು, ಡೆಸ್ಕ್ ಮೊದಲಾದವುಗಳನ್ನು ಶುಚಿಗೊಳಿಸಿಡಲು ಕ್ರಮ ಕೈಗೊಳ್ಳುವಂತೆ ಶಾಲೆಯ ಅಧಿಕಾರಿಗಳಿಗೆ ನಿರ್ದೇಶ ನೀಡಲಾಯಿತು. ಶಾಲೆ ಸಮೀಪದಲ್ಲಿ ಅಪಾಯಕಾರಿ ಮರಗಳಿದ್ದರೆ ಅವುಗಳನ್ನು ಕಡಿದು ಶೀಘ್ರ ತೆರವುಗೊಳಿಸಬೇಕೆಂದೂ ಪಿಟಿಎಗಳಿಗೆ ನಿರ್ದೇಶಿಸಲಾಗಿದೆ.