ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ದಂಪತಿ, ಮಕ್ಕಳು ಸೇರಿದಂತೆ 5 ಮಂದಿ ಅನಾಹುತದಿಂದ ಪಾರು
ಕಾಸರಗೋಡು: ಪ್ರಯಾಣದ ವೇಳೆ ಕಾರಿನಲ್ಲಿ ಬೆಂಕಿ ಎದ್ದು ಅದರಲ್ಲಿದ್ದ ದಂಪತಿ ಮತ್ತು ಅವರ ಮೂವರು ಮಕ್ಕಳು ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ ಪಾರಾದ ಘಟನೆ ಚೆರ್ಕಳದ ಬಳಿ ಇಂದು ಮುಂಜಾನೆ ನಡೆದಿದೆ.
ನ್ಯೂ ಮುಂಬಯಿಯ ಇಡಿಗ ನಿವಾಸಿ ಹಾಗೂ ಗಲ್ಫ್ ಉದ್ಯೋಗಿ ಆಗಿರುವ ಇಕ್ಬಾಲ್ ಅಹಮ್ಮದ್ ಕುಟ್ಟಿ, ಅವರ ಪತ್ನಿ ರುಬೀನ, ಮಕ್ಕಳಾದ ನೌಫ್ (19), ಅಸೀಸ (17) ಮತ್ತು ಉಮ್ಮರ್ (18) ಈ ಅನಾಹುತದಿಂದ ಪಾರಾದವರು. ಇವರು 50 ದಿನಗಳ ಹಿಂದೆಯಷ್ಟೇ ಮುಂಬಯಿಯಿಂದ 14 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಗ್ಯಾಸ್ಚಾಲಿತ ಎಟ್ರಿಗ ಕಾರಿನಲ್ಲಿ ನ್ಯೂ ಮುಂಬಯಿ ಯಿಂದ ಕಣ್ಣೂರು ಕಣ್ಣಾಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ಹೋಗುತ್ತಿದ್ದ ದಾರಿ ಮಧ್ಯೆ ಚೆರ್ಕಳ ಪಿಲಿಕುಂಡ್ಗೆ ತಲುಪಿದಾಗ ಕಾರಿನೊಳಗೆ ಹೊಗೆ ಕಾಣಿಸಿಕೊಂಡಿದೆ.
ತಕ್ಷಣ ಕಾರು ಚಲಾಯಿಸುತ್ತಿದ್ದ ಅಹಮ್ಮದ್ ಇಕ್ಬಾಲ್ ಕುಟ್ಟಿ ಕಾರನ್ನು ಅಲ್ಲೇ ನಿಲ್ಲಿಸಿ ಅದರಲ್ಲಿದ್ದ ಪತ್ನಿ ಮತ್ತು ಮಕ್ಕಳನ್ನು ಹೊರಗಿಳಿಸಿದಾಕ್ಷಣ ಬೆಂಕಿ ಎದ್ದು ಇಡೀ ಕಾರಿಗೇ ಆವರಿಸಿತು. ಕಾರಿನಲ್ಲಿ ಬ್ಯಾಗ್ವೊಂದರಲ್ಲಿ 62,500 ರೂ. ನಗದು, 5 ಪವನ್ ಚಿನ್ನ, 2 ಮೊಬೈಲ್ ಫೋನ್, ಕ್ಯಾಮರಾ ಹಾಗೂ ಹಲವು ದಾಖಲು ಪತ್ರಗಳು ಬೆಂಕಿಗಾಹುತಿಯಾಗಿವೆ ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ. ವಿಷಯ ತಿಳಿದಾಕ್ಷಣ ಕಾಸರಗೋಡು ಅಗ್ನಿಶಾಮಕ ದಳ ತುರ್ತಾಗಿ ಘಟನೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆ.