ಸಾರ್ವಜನಿಕರಿಗೆ ಸಮಸ್ಯೆಯ ಕೇಂದ್ರವಾದ ಕಾಸರಗೋಡು ಹಳೆ ಬಸ್ ನಿಲ್ದಾಣ
ಕಾಸರಗೋಡು: ಕಾಸರಗೋಡು ನಗರ ಸುಂದರ ನಗರ ಎಂದು ಕರೆಯಲ್ಪಡುತ್ತಿರುವಾಗಲೇ ಕಾಸರಗೋಡು ನಗರ ಅವ್ಯವಸ್ಥೆಯ ಕೇಂದ್ರವಾಗಿ ಬದಲಾಗಿದೆ ಎಂಬ ಆರೋಪ ವಿವಿಧ ಭಾಗಗಳಿಂದ ಕೇಳಿ ಬರುತ್ತಿದೆ.
ಕಾಸರಗೋಡು ನಗರ ಸಭೆಯ ವ್ಯಾಪ್ತಿಯಲ್ಲಿರುವ ಕಾಸರಗೋಡು ನಗರದಲ್ಲಿ ಸಾರ್ವಜನಿಕರಿಗೆ ಬೇಕಾದ ಯಾವುದೇ ಸೌಕರ್ಯಗಳಿಲ್ಲದೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿದೆಯೆಂದು ದೂರಲಾಗಿದೆ.
ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಕಾಸರಗೋಡು ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಸ್ಗಾಗಿ ಕಾದು ನಿಲ್ಲಲು ತಂಗುದಾಣವಿಲ್ಲದಿರುವುದು ಪ್ರಧಾನ ಸಮಸ್ಯೆಯಾಗಿಯೇ ಮುಂದುವರಿದಿದೆ. ತಂಗುದಾಣವಿಲ್ಲದಿ ರುವುದರಿಂದ ಮಳೆ-ಬಿಸಿಲಿಗೆ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಹಳೆ ಬಸ್ ನಿಲ್ದಾಣದಲ್ಲಿ ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳವೊದಗಿಸುವುದಾಗಿ ತಿಳಿಸಿ ಹೊಸ ಬಸ್ ನಿಲ್ದಾಣದಲ್ಲಿ ಕಟ್ಟಡ ನಿರ್ಮಿಸಲಾಗಿದ್ದರೂ ಅದನ್ನು ತೆರೆದುಕೊಡಲಾಗಿಲ್ಲ. ಇದರಿಂದ ಬೀದಿ ವ್ಯಾಪಾರಿಗಳು ಈಗಲೂ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸಬೇಕಾಗಿ ಬಂದಿದೆ.
ಕೆಲವು ಬೀದಿ ವ್ಯಾಪಾರಿಗಳು ರಸ್ತೆ ಬದಿಯ ಕಾಲುದಾರಿ ಮೇಲೆ ತಮ್ಮ ಸಾಮಗ್ರಿಗಳನ್ನು ಇರಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ನಡೆದು ಹೋಗಲು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿದೆ. ನಗರದ ಕೆಲವೆಡೆ ಕಾಲುದಾರಿ ರಸ್ತೆಗೆ ಸಮವಾಗಿರುವು ದರಿಂದ ವಾಹನಗಳನ್ನು ಕೂಡಾ ಅದರ ಮೇಲೆ ನಿಲ್ಲಿಸಲಾಗುತ್ತಿದೆ. ಕೆಪಿಆರ್ ರಾವ್ ರೋಡ್ನಲ್ಲಿ ತ್ಯಾಜ್ಯ ನೀರು ಚೆಲ್ಲುತ್ತಿರುವ ಪರಿಣಾಮ ಹೊಂಡ ಸೃಷ್ಟಿಯಾಗಿದ್ದು, ಇದು ಕೂಡಾ ವಾಹನ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಸಮಸ್ಯೆಯಾಗಿ ಕಾಡತೊಡಗಿದೆ. ನಗರದಲ್ಲಿ ಈ ರೀತಿಯಲ್ಲಿ ಸಮಸ್ಯೆಗಳು ಬಿಗುಡಾಯಿಸುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ಭಾಗದಿಂದ ತೀವ್ರಗೊಂಡಿದೆ. ಕಾಸರಗೋಡು ನಗರದಲ್ಲಿ ಸಮಸ್ಯೆಗೆ ಶೀಘ್ರ ಪರಿಹಾರ ಉಂಟಾಗಲಿ ಎಂದು ಸಾರ್ವಜನಿಕರು ಆಗ್ರಹಪಡುತ್ತಿದ್ದಾರೆ.