ಸಿಕ್ಕಿಬಿದ್ದ ಚಿರತೆ ತೃಶೂರು ಪಾರ್ಕ್ಗೆ ಇದು ಕಳೆದ ತಿಂಗಳು ಬೋನಿಗೆ ಬಿದ್ದು ತಪ್ಪಿಸಿಕೊಂಡಿದ್ದ ಚಿರತೆ
ಕಾಸರಗೋಡು: ಬೇಡಡ್ಕ ಕೊಳತ್ತೂರು ಬರೋಟಿಗೆ ಸಮೀಪದ ಎ.ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯಪಾಲಕರು ನಿನ್ನೆ ರಾತ್ರಿ ಭಾರತದಲ್ಲಿ ಮೊತ್ತಮೊದಲಾಗಿ ಆರಂಭಿಸಿರುವ ಡಿಸೈನ್ ಮೃಗಾಲಯವಾದ ತೃಶೂರಿನ ಪುತ್ತೂರು ಝುವೋಲಜಿಕಲ್ ಪಾರ್ಕ್ಗೆ ಸಾಗಿಸಿದ್ದಾರೆ.
ಇದು ಐದು ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಇದರ ಶರೀರದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಅದರಿಂದಾಗಿ ಅರಣ್ಯ ಪಾಲಕರು ಅದಕ್ಕೆ ಮಾದಕಗುಂಡು ಹಾರಿಸಿ ನಂತರ ಪಶುವೈದ್ಯರಿಂದ ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ಅದನ್ನು ಗೂಡಿನ ಸಹಿತ ತೃಶೂರಿಗೆ ಸಾಗಿಸಿದರು.
ಕಳೆದ ಫೆಬ್ರವರಿ ೨೩ರಂದು ಕೊಳತ್ತೂರು ಮಡಂದಕ್ಕೋಡಿನ ಗುಹೆಯೊಳಗೆ ಸಿಲುಕಿಕೊಂಡು ಮಾದಕ ಗುಂಡು ಹಾರಿಸಿ ಅರಣ್ಯ ಪಾಲಕರು ಸೆರೆಹಿಡಿಯಲೆತ್ನಿಸಿದ ವೇಳೆ ಅಲ್ಲಿಂದ ತಪ್ಪಿಸಿಕೊಂಡಿದ್ದ ಚಿರತೆ ಇದಾಗಿದೆಯೆಂದು ಕಾಸರಗೋಡು ರೇಂಜ್ ಅರಣ್ಯಾಧಿಕಾರಿ ಸಿ.ವಿ.ವಿನೋ ದ್ ಕುಮಾರ್ ತಿಳಿಸಿದ್ದಾರೆ.
ಪಶುವೈದ್ಯರುಗಳಾದ ಅಖಿಲ್ ಪ್ರಸಾದ್ ಮತ್ತು ನಿದಿಯಾ ಜೋ ಈ ಚಿರತೆಯನ್ನು ನಿನ್ನೆ ವೈದ್ಯಕೀಯ ತಪಾಸಣೆಗೊಳಪಡಿಸಿದರು. ನೇಶನಲ್ ಟೈಗರ್ ಕನ್ಸರ್ವೇಷನ್ ಅಥೋರಿಟಿ (ಎನ್ಟಿಸಿಎ)ಯ ಮಾರ್ಗಸೂಚಿ ಪ್ರಕಾರ ಬಳಿಕ ಅದನ್ನು ತೃಶೂರಿಗೆ ಸಾಗಿಸಲಾಗಿದೆ. ಇದರಿಂದಾಗಿ ಈ ಚಿರತೆಯನ್ನು ಜಿಲ್ಲೆಯ ಯಾವುದಾದರೊಂದು ಅರಣ್ಯದಲ್ಲಿ ತೆರೆದು ಬಿಡುವ ಸಾಧ್ಯತೆ ಇದೆ ಎಂಬ ಜನರ ಕಳವಳ ನೀಗಿದಂತಾಗಿದೆ.
ಫೆಬ್ರವರಿ ೨೩ರಂದು ಕೊಳತ್ತೂರು ನಿಡುವೋಟಿನ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ್ದ ಬೋನಿಗೆ ಬಿದ್ದಿದ್ದ ಹೆಣ್ಣು ಚಿರತೆಯ ಸಂಗಾತಿಯಾಗಿದೆ ಮೊನ್ನೆ ಬೋನಿಗೆ ಬಿದ್ದ ಗಂಡು ಚಿರತೆಯಾಗಿದೆ ಯೆಂಬ ಶಂಕೆಯನ್ನು ಅರಣ್ಯ ಇಲಾಖಯವರು ವ್ಯಕ್ತಪಡಿಸಿದ್ದಾರೆ.