ಸಿಗರೇಟ್, ಸೋಡ ಸಾಲ ನೀಡದ ದ್ವೇಷ: ಅಂಗಡಿಯ ಗೋದಾಮಿಗೆ ಸೀಮೆ ಎಣ್ಣೆ ಸುರಿದು ಕಿಚ್ಚು: 4 ಲಕ್ಷ ರೂ.ಗಳ ಸೊತ್ತು ಉರಿದು ನಾಶ
ಬದಿಯಡ್ಕ: ಸಿಗರೇಟ್, ಸೋಡ ಸಾಲವಾಗಿ ನೀಡದ ದ್ವೇಷದಿಂದ ವ್ಯಕ್ತಿಯೋರ್ವ ಅಂಗಡಿಯ ಗೋದಾಮಿಗೆ ಕಿಚ್ಚಿಟ್ಟ ಪ್ರಕರಣ ನಡೆದಿದೆ. ಕನ್ಯಪ್ಪಾಡಿಯಲ್ಲಿರುವ ಜೆ.ಕೆ. ಬೇಕರ್ಸ್ ಮತ್ತು ಜೆ.ಕೆ. ಅರೇಂಜರ್ಸ್ ಎಂಬ ವ್ಯಾಪಾರ ಸಂಸ್ಥೆಯ ಗೋದಾಮಿಗೆ ಕಿಚ್ಚಿಡಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಅಂಗಡಿಯ ಮಾಲಕ ಕುಂಟಿಕಾನದ ಲ್ಯಾನ್ಸರ್ ಡಿಸೋಜಾ ನೀಡಿದ ದೂರಿನಂತೆ ತಲ್ಪನಾಜೆಯ ಸಂತು ಯಾನೆ ಸಂತೋಷ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆ ವೇಳೆ ಸಂತೋಷ್ ಸೀಮೆ ಎಣ್ಣೆ ಸುರಿದು ಅಂಗಡಿ ಗೋದಾಮಿಗೆ ಕಿಚ್ಚಿರಿಸಿದ್ದಾನೆಂದು ದೂರಲಾಗಿದೆ. ಗೋದಾಮು ಉರಿಯುತ್ತಿರುವುದನ್ನು ಕಂಡು ತಲುಪಿದ ಅಂಗಡಿ ನೌಕರರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಸುಮಾರು 4 ಲಕ್ಷ ರೂಪಾಯಿಗಳ ಸಾಮಗ್ರಿ ಉರಿದು ನಾಶಗೊಂಡಿದೆ ಎಂದು ದೂರಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಜೆ.ಕೆ. ಬೇಕರ್ಸ್ಗೆ ಬಂದ ಸಂತೋಷ್ ಸಿಗರೇಟ್ ಹಾಗೂ ಸೋಡ ಸಾಲ ಕೇಳಿದ್ದಾನೆ. ಆದರೆ ಸಾಲ ನೀಡಿರಲಿಲ್ಲವೆನ್ನಲಾಗಿದೆ. ಇದೇ ದ್ವೇಷದಿಂದ ರಾತ್ರಿ ತಲುಪಿ ಅಂಗಡಿಯ ಗೋದಾಮಿಗೆ ಸಂತೋಷ್ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.