ಸ್ಥಳ ನೀಡಿದ್ದು ಕೈಗಾರಿಕಾ ಅಭಿವೃದ್ಧಿಗೆ: ತ್ಯಾಜ್ಯ ನಿಕ್ಷೇಪದಿಂದ ಸಂಕಷ್ಟ
ಕಾಸರಗೋಡು: ಕೈಗಾರಿಕೆಯ ಅಭಿವೃದ್ಧಿಗಾಗಿ ಸಿಡ್ಕೋದಿಂದ ವಹಿಸಿಕೊಂಡ ೨ ಎಕ್ರೆ ಭೂಮಿಯನ್ನು ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಕಾಸರ ಗೋಡು ನಗರಸಭೆ ಮಾರ್ಪಡಿಸಿದೆ. ವಿದ್ಯಾನಗರ ಸಿಡ್ಕೋ ಕೈಗಾರಿಕಾ ಎಸ್ಟೇಟ್ನ ‘ತಲೆ ತಿರುಗಿದ ಅಭಿವೃದ್ಧಿ’ಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳಿಂದ, ಮನೆಗಳಿಂದ ಹಣ ಪಡೆದು ವೈಜ್ಞಾನಿಕವಾಗಿ ಸಂಸ್ಕರಿಸಲು ಹಸಿರು ಕ್ರಿಯಾಸೇನೆಯ ನೇತೃತ್ವದಲ್ಲಿ ಸಂಗ್ರಹಿಸುವ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಕಟ್ಟಿ ಇಲ್ಲಿ ತಂದು ಉಪೇಕ್ಷಿಸಲಾಗುತ್ತಿದೆ.
ಮಳೆಗಾಲದಲ್ಲಿ ಗೋಣಿಚೀಲಗಳಲ್ಲಿ ತುಂಬಿಸಿಟ್ಟ ತ್ಯಾಜ್ಯಗಳನ್ನು ಬೀದಿನಾಯಿ ಗಳು ಎಳೆದು ಬಿಸಾಡಿದ್ದು ಇದು ಸಮೀಪದ ಬಾವಿಗಳ ಸಹಿತ ನೀರನ್ನು ಮಲಿನಗೊಳಿಸುತ್ತಿರುವುದಾಗಿ ಕೈಗಾರಿಕಾ ಪ್ರಾಂಗಣದ ಉದ್ಯಮಿಗಳು ದೂರುತ್ತಾರೆ. ಶೆಡ್ಗಳನ್ನು ನಿರ್ಮಿಸಿ ಉದ್ಯಮ ಆರಂಭಿಸಲು ನೀಡುವ ವ್ಯವಸ್ಥೆಯಲ್ಲಿ ವರ್ಷಗಳ ಹಿಂದೆ ಸಿಡ್ಕೋದಿಂದ ಭೂಮಿ ವಹಿಸಿಕೊಳ್ಳಲಾಗಿತ್ತೆಂದು ಸಿಡ್ಕೋ ಅಧಿಕಾರಿಗಳು ನುಡಿಯುತ್ತಾರೆ. ಹೆಸರಿಗಾಗಿ ಮಾತ್ರ ಒಂದೆರಡು ಶೆಡ್ಗಳನ್ನು ನಿರ್ಮಿಸಿದ್ದುದಲ್ಲದೆ ಮೂಲಭೂತ ಸೌಕರ್ಯಗಳನ್ನು ದಕ್ಷತೆಯಿಂದ ನಡೆಸಲು ಇದುವರೆಗೆ ಸಾಧ್ಯವಾಗಿಲ್ಲ. ಕಾಸರಗೋಡು ನಗರಸಭಾ ಪ್ಲಾಸ್ಟಿಕ್ ಶ್ರಡ್ಡಿಂಗ್ ಘಟಕ ಎಂಬ ಹೆಸರಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿದೆಯಾದರೂ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಹೊರಗೆ ರಾಶಿ ಹಾಕಲಾಗಿದೆ. ಸಮೀಪದಲ್ಲೇ ಕಾಸರಗೋಡು ನಗರಸಭಾ ಕೈಗಾರಿಕಾ ಅಭಿವೃದ್ಧಿ ಕೇಂದ್ರ ಎಂಬ ದೊಡ್ಡ ಬೋರ್ಡ್ ಇಟ್ಟು ಎರಡು ಮಹಡಿ ಕಟ್ಟಡ ನಿರ್ಮಿಸಲಾಗಿದ್ದರೂ ಅದು ತ್ಯಾಜ್ಯ ನಿಕ್ಷೇಪ ಕೇಂದ್ರವಾಗಿ ಬದಲಾಗಿದೆ. ಸಮೀಪದ ಕೈಗಾರಿಕಾ ಉದ್ಯಮಗಳಿಗೆ ನಡೆದುಕೊಂಡು ಹೋಗುವವರಿಗೆ ಮೂಗು ಮುಚ್ಚಿ, ತ್ಯಾಜ್ಯಗಳನ್ನು ಮೆಟ್ಟಿ ಸಂಚರಿಸಬೇಕಾಗುತ್ತಿದೆ. ಸಿಡ್ಕೋದ ಶೋಚನೀಯಾವಸ್ಥೆಯನ್ನು ಪರಿಹರಿಸಲು ಜಿಲ್ಲಾ ಆಡಳಿತ ಕೂಟ, ಉದ್ಯಮಿಗಳ ನೇತೃತ್ವದಲ್ಲಿ ಯತ್ನ ನಡೆಯುತ್ತಿರುವ ವೇಳೆಯಲ್ಲೇ ಈ ರೀತಿಯ ತಲೆತಿರುಗಿದ ನಿಲುವುಗಳೊಂದಿಗೆ ಮುಂದುವರಿಯುತ್ತಿರುವುದನ್ನು ಬದಲಿಸಬೇಕೆಂದು ಉದ್ಯಮಿಗಳು ಆಗ್ರಹಿಸಿದ್ದಾರೆ.