ಹಡಗಿನಲ್ಲಿ ಸಿಬ್ಬಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಹಡಗಿನೊಳಗೆ ಸಿಬ್ಬಂದಿಯೋರ್ವ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಕುನ್ನಿಗೆ ಸಮೀಪದ ತಿರುವಕ್ಕೋಳಿ ಅಂಗಕಳರಿ ವೀಟಿಲ್ನ ಪ್ರಶಾಂತ್ (36) ಸಾವನ್ನಪ್ಪಿದ ವ್ಯಕ್ತಿ. ಜಪಾನ್ನಿಂದ ಯುಎಸ್ ಬಂದರಿಗೆ ಹೋಗುತ್ತಿದ್ದ ತೈಬೋಕ್ಸ್ ಎಕ್ಸ್ಪ್ಲೋರ್ ಎಂಬ ಹೆಸರಿನ ಎಲ್ಪಿಜಿ ಹಡಗಿನಲ್ಲಿ ಸಾಗುತ್ತಿದ್ದ ವೇಳೆ ಪ್ರಶಾಂತ್ ಹಡಗಿನೊಳಗೆ ಕುಸಿದು ಬಿದ್ದಿದ್ದಾರೆ. ಇವರು ಪ್ರಸ್ತುತ ಹಡಗಿನ ಸಿಬ್ಬಂದಿಯಾ ಗಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಪ್ರಶಾಂತ್ರ ಸಾವಿನ ಸುದ್ದಿಯನ್ನು ಆ ಹಡಗಿನವರೇ ಮನೆಯವರಿಗೆ ಫೋನ್ ಮೂಲಕ ತಿಳಿಸಿದ್ದಾರೆ.
ಹಡಗಿನ ಇಂಜಿನ್ ರೂಂನ ಮೋಟಾರ್ ಮ್ಯಾನ್ ಆಗಿ ಪ್ರಶಾಂತ್ ದುಡಿಯುತ್ತಿದ್ದರು. ಕಳೆದ ನವಂಬರ್ನಲ್ಲಿ ಅವರು ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಮುಂದಿನ ಅಗೋಸ್ತ್ನಲ್ಲಿ ಊರಿಗೆ ಬರುವುದಾಗಿ ಕೆಲವು ದಿನಗಳ ಹಿಂದೆ ಫೋನ್ ಮೂಲಕ ಮನೆಯವರಿಗೆ ತಿಳಿಸಿದ್ದರು.
ಹಡಗು ಸಿಬ್ಬಂದಿಯಾಗಿರುವ ಉದುಮ ಉದಯಮಂಗಲದ ದಿ| ಚೆಕ್ಲಿ ಕೃಷ್ಣನ್-ಸರೋಜಿನಿ ದಂಪತಿಯ ಪುತ್ರನಾಗಿರುವ ಪ್ರಶಾಂತ್ ಪತ್ನಿ ಲಿಜಿ, ಮಕ್ಕಳಾದ ಅನ್ಶಿತಾ, ಆಶ್ಮಿಕಾ, ಸಹೋದರರಾದ ಪ್ರದೀಪ್ ಮತ್ತು ಪ್ರಸೀದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತಲುಪಿಸುವ ಕ್ರಮ ಆರಂಭಿಸಲಾಗಿದೆ.