ಹಲವೆಡೆಗಳಲ್ಲಿ ಅಬಕಾರಿ ದಾಳಿ: ಭಾರೀ ಪ್ರಮಾಣದ ಗಾಂಜಾ, ಕರ್ನಾಟಕ ಮದ್ಯ ವಶ; ಇಬ್ಬರ ಸೆರೆ, ಓರ್ವ ಪರಾರಿ

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಮೂರು ಕಡೆ ಮಿಂಚಿನ ದಾಳಿ ನಡೆಸಿ ಒಟ್ಟು 2.110 ಕಿಲೋ ಗಾಂಜಾ ಮತ್ತು 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾ ಗಿದೆ. ಓರ್ವ ಪರಾರಿಯಾಗಿದ್ದಾನೆ.

ಪೊಯಿನಾಚಿ ಸಮೀಪದ ಮೈಲಾಟಿಯಲ್ಲಿ ಹೊಸದುರ್ಗ ಎಕ್ಸೈಸ್  ಸರ್ಕಲ್ ಕಚೇರಿಯ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದ ಅಬಕಾರಿ ಅಧಿಕಾರಿಗಳ ತಂಡ  ಮೊನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 2.010 ಕಿಲೋಗ್ರಾಂ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ  ಮೈಲಾಟಿ ಚೆರುಗರದ ಬಾದುಶಾ ಕೆ ಎಂಬಾತನನ್ನು ಬಂಧಿಸಲಾಗಿದೆ.  ಆದರೆ ಈ ಮಾಲನ್ನು ಬೈಕ್‌ನಲ್ಲಿ ತಂದಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಆತನನ್ನು ಬಾರಾ ಗ್ರಾಮದ ಅರ್ಯಡ್ಕ ನಿವಾಸಿ  ಬಿನು ಮಾಂಙಾಡ್  ಎಂಬುದಾಗಿ ಗುರುತಿಸಲಾಗಿದೆ. ಆತನ ಪತ್ತೆಗಾಗಿರುವ ಶೋಧ ಕಾರ್ಯಾ ಚರಣೆ ಮುಂದುವರಿಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ, ಪ್ರಿವೆಂಟೀವ್ ಆಫೀಸರ್ (ಗ್ರೇಡ್)ಗಳಾದ ಮನೀಶ್ ಕೆ, ನಿಶಾದ್ ಎ, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಮನೋಜ್ ಪಿ, ಸಿಜು ಕೆ, ಅರುಣ್ ಆರ್.ಕೆ, ಅಜೂಬ್ ಮತ್ತು ಚಾಲಕ ದಿಲ್‌ಜಿತ್ ಪಿ.ವಿ ಎಂಬವರು ಒಳಗೊಂಡಿದ್ದರು.

ಇದೇ ರೀತಿ ಕಾಸರಗೋಡು ಎಕ್ಸೈಸ್ ಸ್ಪೆಶಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ ಸ್ಪೆಕ್ಟರ್ ವಿಷ್ಣು ಪ್ರಕಾಶ್ ನೇತೃತ್ವದ ತಂಡ ನಿನ್ನೆ ಮಂಗಲ್ಪಾಡಿ ಬಂದ್ಯೋಡ್ ಅಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 100 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಅಡ್ಕದ ಅಬ್ದುಲ್ಲಾ ಎಚ್ ಕೆ (63) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಶ್ರೀನಿವಾಸನ್ ಪತ್ತಿಲ್, ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗಳಾದ ನೌಶಾದ್ ಕೆ, ಅಜೇಶ್, ಪ್ರಜಿತ್, ಸಿವಿಲ್ ಎಕೆಸ್ ಆಫೀಸರ್‌ಗಳಾದ ಮಂಜುನಾಥನ್, ರಾಜೇಶ್ ಮತ್ತು ಸ್ವಾತಿ ಎಂಬಿವರು ಒಳಗೊಂಡಿದ್ದರು.

ಮಂಜೇಶ್ವರ ಸಮೀಪದ ಕಯ್ಯಾರಿನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಯ್ಯಾರು ಕುಡಾಲು ಮೇರ್ಕಳ ನಿವಾಸಿ ಚಂದು ಅಲಿಯಾಸ್ ಚಂದ್ರಹಾಸ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗೆಡ್) ಜನಾರ್ದನನ್ ಕೆ.ಎ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ (ಗ್ರೇಡ್) ರಮೇಶನ್ ಆರ್, ಜಿತೇಂದ್ರನ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಮೋಹನ್ ಕುಮಾರ್ ಎನ್.ಸಿ ಮತ್ತು ಸಿಜಿನ್ ಸಿ ಎಂಬಿವರ  ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

RELATED NEWS

You cannot copy contents of this page