40 ಕೋಟಿ ರೂ.ಗಳ ಮಾದಕವಸ್ತು ಸಹಿತ ಮೂವರು ಮಹಿಳೆಯರ ಸೆರೆ
ಕಾಸರಗೋಡು: ಮಾದಕವಸ್ತು ವಿರುದ್ಧ ರಾಜ್ಯದಾದ್ಯಂತ ಪೊಲೀಸ್, ಅಬಕಾರಿ ಅಧಿಕಾರಿಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವಾಗಲೇ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಮಾದಕವಸ್ತು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಹಾಗೂ ಏರ್ ಇಂಟೆಲಿಜೆನ್ಸ್ ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ೪೦ ಕೋಟಿ ರೂಪಾಯಿಗಳ ಮಾದಕವಸ್ತು ವಶಪಡಿಸಲಾಗಿದೆ. ಈ ಸಂಬಂಧ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಚೆನ್ನೈ ನಿವಾಸಿ ರಾಬಿಯತ್ ಸೈದು ಸೈನುದ್ದೀನ್ (40), ಕೊಯಂಬತ್ತೂರು ನಿವಾಸಿ ಕವಿತಾ ರಾಜೇಶ್ ಕುಮಾರ್ (40), ತೃಶೂರಿನ ಸಿಮಿ ಬಾಲಕೃಷ್ಣನ್ (36) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಮೊನ್ನೆ ರಾತ್ರಿ 11.45ಕ್ಕೆ ಥಾಯ್ಲೆಂಡ್ನಿಂದ ಬಂದ ಏರ್ ಏಷ್ಯಾ ವಿಮಾನದಲ್ಲಿ ಇವರು ಬಂದಿದ್ದರು. ಇವರ ಕೈಯಿಂದ ೩೪ ಕಿಲೋ ಹೈಬ್ರೀಡ್ ಗಾಂಜಾ, ಎಂಡಿಎಂಎ ಬೆರೆಸಿದ ೧೫ ಕಿಲೋ ಚಾಕ್ಲೆಟ್, ಕೇಕ್, ಕ್ರೀಂ, ಬಿಸ್ಕೆಟ್ ಎಂಬಿವುಗಳನ್ನು ವಶಪಡಿಸಲಾಗಿದೆ. ಇವರು ಥಾಯ್ಲೆಂಡ್ನಿಂದ ಮಲೇಶಿಯಾ ಮೂಲಕ ಕರಿಪ್ಪೂರ್ಗೆ ತಲುಪಿದ್ದರು. ಸೆರೆಗೀಡಾದ ಮಹಿಳೆಯರನ್ನು ಸಮಗ್ರ ತನಿಖೆಗೊಳಪಡಿಸಿದರೆ ಇದರ ಹಿಂದೆ ಕಾರ್ಯಾಚರಿಸಿದ ಮಾದಕವಸ್ತು ಮಾಫಿಯಾಗಳ ಕುರಿತು ಹೆಚ್ಚಿನ ಮಾಹಿತಿ ಲಭಿಸಬಹುದೆಂದು ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.