೩೪ ಬಾರಿ ಮುಂದೂಡಲ್ಪಟ್ಟ ಲಾವ್ಲಿನ್ ಹಗರಣ ವಾದ ಇಂದು ಸುಪ್ರೀಂಕೋರ್ಟ್ನಲ್ಲಿ ಪರಿಗಣನೆಗೆ
ಹೊಸದಿಲ್ಲಿ: ಒಂದಲ್ಲ ಒಂದು ಕಾರಣಗಳಿಂದಾಗಿ ಸತತವಾಗಿ ೩೪ ಬಾರಿ ಮುಂದೂಡಲ್ಪಟ್ಟಿದ್ದ ಕೇರಳದಲ್ಲಿ ವರ್ಷಗಳ ಹಿಂದೆ ಭಾರೀ ರಾಜಕೀಯ ಕೋಲಾಹಲವೆಬ್ಬಿಸಿದ್ದ ಮಹಾ ಭ್ರಷ್ಟಾಚಾರ ಗಳಲ್ಲೊಂದಾದ ಎಸ್ಎನ್ಸಿ ಲಾವ್ಲಿನ್ ಹಗರಣದ ಅರ್ಜಿ ಮೇಲಿನ ವಾದ ಆಲಿಸುವಿಕೆಯನ್ನು ಸುಪ್ರೀಂಕೋರ್ಟ್ ಇಂದು ಮತ್ತೆ ಪರಿಗಣಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಉಜ್ಜಾಲ್ ದುಯಾಲ್ ಎಂಬ ವರನ್ನೊಳಗೊಂಡ ಸುಪ್ರೀಂಕೋರ್ಟ್ನ ವಿಭಾಗೀಯ ಪೀಠ ಈ ಅರ್ಜಿಯನ್ನು ಇಂದು ಪರಿಶೀಲಿಸುತ್ತಿದೆ. ಅಂದು ರಾಜ್ಯ ವಿದ್ಯುತ್ ಖಾತೆ ಸಚಿವರಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ವಿದ್ಯುತ್ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ. ಮೋಹನ್ಚಂದ್ರನ್, ರಾಜ್ಯ ಸರಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ವಿ. ಫ್ರಾನ್ಸಿಸ್ ಸೇರಿದಂತೆ ಹಲವರನ್ನು ಲಾವ್ಲಿನ್ ಹಗರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ಬಳಿಕ ಪಿಣರಾಯಿ ವಿಜಯನ್, ಮೋಹನ್ಚಂದ್ರನ್ ಮತ್ತು ಎಂ. ಫ್ರಾನ್ಸಿಸ್ರನ್ನು ಕೇರಳ ಹೈಕೋರ್ಟ್ ಈ ಪ್ರಕರಣದಲ್ಲಿ ದೋಷಮೂಕ್ತಗೊಳಿಸಿ ತೀರ್ಪು ನೀಡಿತ್ತು. ಈ ಮೂವರನ್ನು ದೋಷಮುಕ್ತಗೊಳಿಸಿ ಅವರಿಗೆ ಕ್ಲೀನ್ಚಿಟ್ ನೀಡಿದ ಹೈಕೋರ್ಟ್ನ ತೀರ್ಪಿನ ವಿರುದ್ಧ ಈ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ೨೦೧೭ರಲ್ಲಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಇದರ ಹೊರತಾಗಿ ಇದೇ ಹಗರಣದ ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿರುವ ತಮ್ಮನ್ನೂ ಕೂಡಾ ಹೊರತುಪಡಿಸಬೇಕೆಂದು ಕೋರಿ ರಾಜ್ಯ ವಿದ್ಯುನ್ಮಂಡಳಿತ ನಿವೃತ್ತ ಅಧಿಕಾರಿಗಳಾದ ಆರ್. ಶಿವದಾಸ್, ಕಸ್ತೂರಿರಾಜ್ ಅಯ್ಯರ್ ಮತ್ತು ಕೆ.ಜಿ. ರಾಜಶೇಖರನ್ ಎಂಬವರೂ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದೂ ಈಗ ನ್ಯಾಯಲಯದ ಪರಿಗಣನೆಯಲ್ಲಿದೆ.
ಪಿಣರಾಯಿ ವಿಜಯನ್ ಸೇರಿದಂತೆ ಮೂವರನ್ನು ಈ ಪ್ರಕರಣದಿಂದ ದೋಷಮುಕ್ತಗೊಳಿಸಿ ಹೈಕೋರ್ಟ್ ನೀಡಿದ ಮೇಲ್ಮನವಿಯ ಮೇಲಿನ ವಾದ ಆಲಿಸುವಿಕೆಯನ್ನು ಸುಪ್ರೀಂಕೋರ್ಟ್ ವಿವಿಧ ಕಾರಣಗಳಿಂದ ಈ ಹಿಂದೆ ೩೪ ಬಾರಿ ಮುಂದೂಡಿತ್ತು. ಕೊನೆಯದಾಗಿ ಸೆಪ್ಟಂಬರ್ ೧೨ರಂದು ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಮತ್ತೆ ಪರಿಶೀಲಿಸಿದಾಗ ಆ ಬಗ್ಗೆ ವಾದಿಸಲು ನಮಗೆ ಇನ್ನಷ್ಟು ಸಮಯದ ಅಗತ್ಯವಿದೆಯೆಂದು ಸಿಬಿಐ ನ್ಯಾಯಾಲಯದೊಂದಿಗೆ ವಿನಂತಿಸಿ ಕೊಂಡಿತ್ತು. ಅದರಿಂದಾಗಿ ವಾದ ಆಲಿಸುವಿಕೆಯನ್ನು ಸುಪ್ರೀಂಕೋರ್ಟ್ ಬಳಿಕ ಇಂದಿಗೆ ಮತ್ತೆ ಮುಂದೂಡಿತ್ತು. ಲಾವ್ಲಿನ್ ಹಗರಣದ ವಾದ ಆಲಿ ಸುವಿಕೆಯನ್ನು ಪದೇ ಪದೇ ಮುಂದೂಡಲ್ಪಡುವುದು ಅದು ಭಾರೀ ರಾಜಕೀಯ ವಿವಾದಗಳಿಗೂ ದಾರಿ ಮಾಡತೊಡಗಿದೆ.