ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಪೇಟೆ ಬಸ್ ನಿಲ್ದಾಣ ಬಳಿ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಸ್ಥಿತಿಯಲ್ಲಿದ್ದು, ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಈ ಪರಿಸರ ದಲ್ಲಿ ತಿಂಗಳ ಹಿಂದೆ ವಾಹನ ವೊಂದು ಸ್ಲ್ಯಾಬ್ನ ಮೇಲೆ ಸಂಚರಿಸಿರುವುದೇ ಸ್ಲ್ಯಾಬ್ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ದಿನನಿತ್ಯ ಮಕ್ಕಳ ಸಹಿತ ಹಲವಾರು ಮಂದಿ ಈ ಪರಿಸರದಲ್ಲೇ ಬಸ್ ತಂಗು ದಾಣಕ್ಕೆ ತೆರಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ರಾತ್ರಿ ಕಾಲದಲ್ಲಿ ಹೊಂಡ ಗಮನಕ್ಕೆ ಬಾರದೆ ಬೀಳುವ ಸಾಧ್ಯತೆ ಇದೆ. ಕುಸಿದುಬಿದ್ದ ಸ್ಲ್ಯಾಬನ್ನು ದುರಸ್ತಿಗೊಳಿಸುವ ಬದಲು ಇಲ್ಲಿ ಹಗ್ಗಕಟ್ಟಿ ಎಚ್ಚರಿಕೆ ನೀಡಲಾಗಿದೆ. ಆದರೆ ಇದು ಗಮನಕ್ಕೆ ಬಾರದೆ ಕೆಲವೊಮ್ಮೆ ಅಪಾಯ ಉಂಟಾಗಬಹುದಾದ ಸಾಧ್ಯತೆ ಇದೆಯೆಂದು ಸ್ಥಳೀಯರು ತಿಳಿಸಿದ್ದಾರೆ.
ಸಂಬಂಧಪಟ್ಟ ಗುತ್ತಿಗೆದಾರರು ಕೂಡಲೇ ಸ್ಲ್ಯಾಬನ್ನು ದುರಸ್ತಿಗೊಳಿ ಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.






