ಉಪ್ಪಳ: ನೈತಿಕ ಪೊಲೀಸ್ಗಿರಿ ಹೆಸರಲ್ಲಿ ಯುವಕನಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.
ಉಪ್ಪಳ ನಯಾಬಜಾರ್ನ ಶೇಕ್ ಮೊಹಮ್ಮದ್ ಕೈಫ್ (21) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕುಂಜತ್ತೂರು ಕಣ್ವತೀರ್ಥ ನಿವಾಸಿ ಯೂ, ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30)ಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಾಸರಗೋಡಿನಿಂದ ಥಿಯೇಟರ್ ವೊಂದರಲ್ಲಿ ಸಿನಿಮಾ ವೀಕ್ಷಿಸಿ ವಾಸಸ್ಥಳಕ್ಕೆ ಮರಳುತ್ತಿದ್ದ ಇಬ್ರಾಹಿಂ ಕರೀಂರನ್ನು ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ತಂಡ ತಡೆದು ನಿಲ್ಲಿಸಿ ಪ್ರಶ್ನಿಸಿ ಹಲ್ಲ್ಲೆಗೈದಿತ್ತೆನ್ನಲಾಗಿದೆ. ಅನಂತರ ಹಿಂಬಾಲಿಸಿದ ತಂಡ ವಾಸಸ್ಥಳದಲ್ಲಿ ಇಬ್ರಾಹಿಂ ಕರೀಂಗೆ ಹಲ್ಲೆಗೈದು ತಲೆಯನ್ನು ಗೋಡೆಗೆ ಬಡಿದು ಗಾಯಗೊಳಿಸಿತ್ತೆನ್ನಲಾಗಿದೆ. ಹಲ್ಲೆಗೈದ ತಂಡದಲ್ಲಿ ಒಟ್ಟು ಐದು ಮಂದಿಯಿದ್ದರೆಂದು ಗಾಯಾಳು ತಿಳಿಸಿದ್ದಾನೆ. ಇದರಂತೆ ಕೇಸು ದಾಖಲಿಸಿಕೊಂಡ ಮಂಜೇಶ್ವರ ಪೊಲೀ ಸರು ಓರ್ವನನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.







