ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕದಲ್ಲಿ ಖಾಸಗಿ ಬಸ್ ಚಾಲಕನಿಗೆ ಮಾರಕವಾಗಿ ಹಲ್ಲೆಗೈದ ಬಳಿಕ ದಾರಿ ಮಧ್ಯೆ ಉಪೇಕ್ಷಿಸಿದ ಘಟನೆ ನಡೆದಿದೆ. ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲುಗೊಂಡ ಚಾಲಕನಿಗೆ ಪ್ರಜ್ಞೆ ಮರಳಿರುವುದರೊಂದಿಗೆ ಘಟನೆ ಬಹಿರಂಗಗೊಂಡಿದೆ. ಬೇಡಡ್ಕ ಪೊಲೀಸರು ಸ್ವತಃ ತನಿಖೆ ಆರಂಭಿಸಿದ್ದಾರೆ. ಚಾಲಕನಿಂದ ಸಮಗ್ರವಾದ ಹೇಳಿಕೆ ಸಂಗ್ರಹಿಸಿದ ಬಳಿಕ ಕೇಸು ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಖಾಸಗಿ ಬಸ್ ಚಾಲಕ ಬುಧವಾರ ಬೆಳಿಗ್ಗೆ ಬಂದಡ್ಕ ಬಸ್ ನಿಲ್ದಾಣದ ಸಮೀಪ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಬಂದಡ್ಕದ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ವೈದ್ಯರು ನಡೆಸಿದ ತಪಾಸಣೆಯಲ್ಲಿ ಪ್ರಜ್ಞಾಹೀನನಾಗಿರುವುದಾಗಿಯೂ, ಗಂಭೀರ ಸ್ಥಿತಿಯಲ್ಲಿರುವುದಾಗಿಯೂ ಪತ್ತೆಹಚ್ಚಲಾಯಿತು. ಆ ಬಳಿಕ ವೈದ್ಯರ ನಿರ್ದೇಶದಂತೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ನಡೆಸಿದ ಸಮಗ್ರ ತಪಾಸಣೆಯಲ್ಲಿ ಮೆದುಳಿನೊಳಗೆ ನರ ತುಂಡಾಗಿರುವು ದಾಗಿಯೂ, ಸ್ಟ್ರೋಕ್ ಸಂಭವಿಸಿರುವುದಾಗಿಯೂ ಖಚಿತಪಡಿಸಲಾಯಿತು. ಇದು ಹೇಗೆ ಸಂಭವಿಸಿರಬಹುದು ಎಂಬ ಬಗ್ಗೆ ಶಂಕೆ ಮೂಡಿತು. ಈ ಮಧ್ಯೆ ಬಸ್ ಚಾಲಕನಿಗೆ ನಿನ್ನೆ ಪ್ರಜ್ಞೆ ಮರಳಿದೆ.
ಆ ಹಿನ್ನೆಲೆಯಲ್ಲಿ ಚಾಲಕ ಹೇಳಿಕೆ ನೀಡಿದ್ದು, ಮಂಗಳವಾರ ರಾತ್ರಿ ತಂಡವೊಂದು ಆಕ್ರಮಿಸಿ ಹಲ್ಲೆಗೊಳಿಸಿರುವುದಾಗಿ ಸಮೀಪದ ಸಂಬಂಧಿಕರಲ್ಲಿ ತಿಳಿಸಿದ್ದಾರೆ. ಆಕ್ರಮಿಸಿದವರ ಹೆಸರುಗಳನ್ನು ಕೂಡಾ ತಿಳಿಸಲಾಗಿದ್ದರೂ ಪೊಲೀಸರು ಈ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ. ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕವೇ ಆಕ್ರಮಣದ ಹೆಚ್ಚಿನ ಮಾಹಿತಿ ಲಭಿಸಲು ಸಾಧ್ಯವೆಂದು ಹೇಳಲಾಗುತ್ತಿದೆ.






