ಬದಿಯಡ್ಕ: ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಸಮಾವೇಶದಲ್ಲಿ ತುಳುವನ್ನು ಅಧಿಕೃತ ದ್ವಿತೀಯ ಭಾಷೆಯಾಗಿ ಘೋಷಿಸಬೇಕೆಂದು ಒತ್ತಾಯಿಸುವ ಪೂರ್ವಭಾವಿಯಾಗಿ ವಿಶ್ವ ತುಳುವೆರೆ ಆಯನಕೂಟ ಮತ್ತು ತುಳು ಅಕಾಡಮಿ ನೇತೃತ್ವದಲ್ಲಿ ಇಂದು ಬದಿಯಡ್ಕದಲ್ಲಿ ಸಭೆ ನಡೆಸಲಾಯಿತು. ನಾಳೆ ನಡೆಯಲಿರುವ ಸಮಾವೇಶದಲ್ಲಿ ಕಾಸರಗೋಡಿನ ಸಮಸ್ತ ತುಳುವರ ಪರವಾಗಿ ತುಳುವನ್ನು ಅಧಿಕೃತವಾಗಿ ಭಾಷೆಯಾಗಿ ಘೋಷಿಸಬೇಕು ಹಾಗೂ ಸಂವಿಧಾನದ ೮ನೇ ಪರಿಚ್ಛೇಧದಲ್ಲಿ ಸೇರಿಸಲು ಕರ್ನಾಟಕ ಸರಕಾರ ಮುತುವರ್ಜಿ ವಹಿಸಬೇಕೆಂದು ಮನವಿ ಮಾಡಲಾಯಿತು. ತುಳು ಸಾಂಸ್ಕೃತಿಕ ರಂಗದಲ್ಲಿ ಕಾಸರಗೋಡಿನ ಹಲವಾರು ಗಣ್ಯರು ತಮ್ಮ ಸಾಧನೆ ಮೆರೆದಿದ್ದು, ವಿಶ್ವ ತುಳುವೆರೆ ಆಯನ ಕೂಟ ಬದಿಯಡ್ಕದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ತುಳುವಿಗೆ ದ್ವಿತೀಯ ಭಾಷೆಯ ಪರಿಗಣನೆ ಲಭಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ತುಳುವೆರೆ ಆಯನದ ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ’ಸೋಜ, ಡಾ| ಶ್ರೀನಿಧಿ ಸರಳಾಯ, ಅಖಿಲೇಶ್ ನಗುಮುಗಂ, ತಾರಾನಾಥ ರೈ ಕಡಾರು, ಜಯಂತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.






