ಕುಂಬಳೆ: ಮಂಜೇಶ್ವರ ಬ್ಲೋಕ್ ಪಂಚಾಯತ್ನ ಡಿವಿಷನ್ಗಳಿಗೆ ಅಭ್ಯರ್ಥಿಗಳನ್ನು ಮುಸ್ಲಿಂ ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ನಿನ್ನೆ ಬೆಳಿಗ್ಗೆ ಘೋಷಿಸಲಿರುವಂತೆಯೇ ಮೊನ್ನೆ ಮಧ್ಯರಾತ್ರಿ ಫೇಸ್ಬುಕ್ ಮೂಲಕ ಓರ್ವ ಅಭ್ಯರ್ಥಿಯನ್ನು ಘೋಷಿಸಿರುವುದು ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಪಕ್ಷದ ನಾಯಕತ್ವಕ್ಕೆ ನೀಡಿದ ಹೆಸರುಗಳಲ್ಲಿ ಇಲ್ಲದಿದ್ದ ವ್ಯಕ್ತಿಯ ಹೆಸರನ್ನು ಈ ರೀತಿಯಲ್ಲಿ ಘೋಷಿಸಿರುವುದು ಯಾರು, ಯಾರಲ್ಲಿ ಕೇಳಿಯಾಗಿದೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಬ್ಲೋಕ್ ಪಂ.ನ ಬಂದ್ಯೋಡು ಡಿವಿಶನ್ಗೆ ಮುಸ್ಲಿಂ ಲೀಗ್ ಪಂ.ಕಮಿಟಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅವರನ್ನು ಮೊದಲ ಹೆಸರಾಗಿ ಪಕ್ಷದ ನಾಯಕತ್ವಕ್ಕೆ ಪಟ್ಟಿ ನೀಡಿರುವುದಾಗಿ ಕಾರ್ಯಕರ್ತರು ಹೇಳುತ್ತಿದ್ದಾರೆ.
ದ್ವಿತೀಯ ಹಾಗೂ ಮೂರನೆಯವರಾಗಿ ಯೂತ್ ಲೀಗ್ ಕಾರ್ಯಕರ್ತರಾದ ಬಿ.ಎಂ. ಮುಸ್ತಫ, ಮಜೀದ್ ಪಚ್ಚಂಬಳ ಎಂಬಿವರನ್ನು ನಿರ್ದೇಶಿಸಲಾಗಿತ್ತು. ಆದರೆ ಆ ಕುರಿತಾಗಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸದೆ ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಅಸೀಸ್ ಮರಿಕೆ (ಅಬ್ದುಲ್ ಅಸೀಸ್) ಆ ಡಿವಿಶನ್ಗೆ ತನ್ನನ್ನು ಘೋಷಿಸಿರುವುದಾಗಿ ಕಾರ್ಯಕರ್ತರು ಆರೋಪಿಸಿದ್ದಾರೆ. ಮುಸ್ಲಿಂ ಲೀಗ್ನ ಶಕ್ತಿ ಹೊಂದಿರುವ ಡಿವಿಶನ್ನಲ್ಲಿ ಕಾರ್ಯಕರ್ತರಿಗೆ ಸವಾಲೆಸೆದು ಅಭ್ಯರ್ಥಿಯನ್ನು ನಿರ್ಧರಿಸಿರುವುದು ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷಕ್ಕೆ ಉತ್ತಮನಾದ ಅಭ್ಯರ್ಥಿ ಶಾಹುಲ್ ಹಮೀದ್ ಆಗಿದ್ದಾರೆಂದೂ ಈ ಬಾರಿ ಪಂಚಾಯತ್ ಬೋರ್ಡ್ ಅಧ್ಯಕ್ಷರಾಗಲು ಶಾಹುಲ್ಗೆ ಬಂದ್ಯೋಡು ಪಂ. ವಾರ್ಡ್ನಲ್ಲಿ ಸ್ಪರ್ಧಿಸಬೇಕೆಂದು ಪಕ್ಷ ಆಗ್ರಹಿಸಿರುವುದಾಗಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ಆ ವಾರ್ಡ್ನ್ನು ಮೀಸಲಾತಿ ವಾರ್ಡ್ ಆಗಿ ಘೋಷಿಸಲಾಗಿತ್ತು. ಇದರಿಂದ ಶಾಹುಲ್ ಬಂದ್ಯೋಡು ಬ್ಲೋಕ್ ಡಿವಿಶನ್ನಲ್ಲಿ ಅಭ್ಯರ್ಥಿಯಾಗಲಿ ಎಂದು ತೀರ್ಮಾನಿಸಿರುವುದಾಗಿ ಹೇಳಲಾಗುತ್ತಿದೆ. ಮಾತ್ರವಲ್ಲ ಮಂಗಲ್ಪಾಡಿ ಪಂಚಾಯತ್ನಲ್ಲಿ ಯುಡಿಎಫ್ನ ಪ್ರಧಾನ ಪಕ್ಷವಾದ ಕಾಂಗ್ರೆಸ್ನೊಂದಿಗೆ ಸೀಟುಗಳ ಕುರಿತು ಚರ್ಚೆ ಕೂಡಾ ನಡೆಸಿಲ್ಲವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ.







