ಹೊಸದುರ್ಗ: ಗೃಹಿಣಿಯನ್ನು ಕಡಿದು ಕೊಲೆಗೈಯ್ಯಲು ಯತ್ನಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಕಾಞಂಗಾಡ್, ಕಡಪ್ಪುರಂ, ಬಾವನಗರ ಇಲ್ಯಾಸ್ನಗರದಲ್ಲಿ ರಂಜಾನ್ ವ್ರತಾಚರಣೆ ಆರಂಭ ಗೊಂಡ ದಿನದಂದೇ ದಾರುಣವಾದ ಘಟನೆ ನಡೆದಿದೆ. ಇಬ್ರಾಹಿಂ (62) ಆತ್ಮಹತ್ಯೆಗೈದವರು. ಇವರ ಪತ್ನಿ ಮರಿಯ (೫೫)ರನ್ನು ಗಂಭೀರ ಇರಿತದ ಗಾಯದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಕುಟುಂಬ ಸಮಸ್ಯೆ ಬಗ್ಗೆ ಇಬ್ಬರಲ್ಲಿ ವಾಗ್ವಾದ ವೇರ್ಪಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ರೋಷಗೊಂಡ ಇಬ್ರಾಹಿಂ ಕತ್ತಿ ತೆಗೆದು ಮರಿಯಂರ ತಲೆಗೆ ಕಡಿದಿದ್ದಾನೆನ್ನಲಾಗಿದೆ.
ಬೊಬ್ಬೆ ಕೇಳಿ ನೆರೆಮನೆಯವರು ತಲುಪಿದಾಗ ಇಬ್ರಾಹಿಂ ಮನೆಯಿಂದ ಇಳಿದು ಪರಾರಿಯಾಗಿದ್ದಾನೆ. ಮನೆಯೊಳಗೆ ರಕ್ತದ ಮಡುವಿನಲ್ಲಿ ಮರಿಯಂ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಯ ಬಳಿಕ ನಾಪತ್ತೆ ಯಾಗಿದ್ದ ಪತಿ ಇಬ್ರಾಹಿಂನ ಮೃತದೇಹ ಬೆಳಿಗ್ಗೆ ಮನೆಯ ಸಮೀಪದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಹೊಸದುರ್ಗ ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ.






