ಕಾಸರಗೋಡು: ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ನೋಂದಾವಣೆ ಹೊಂದಿರುವ ಕಾರಿನಲ್ಲಿ ಸಾಗಿಸುತ್ತಿದ್ದ 1.25ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.ಇದಕ್ಕೆ ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆ ನಿವಾಸಿ ಲತೀಶ್ ಪೂಜಾರಿ ಮತ್ತು ಬೆದ್ರಡ್ಕ ನಿವಾಸಿ ಸುರೇಶ್ ಬಿ.ಪಿ ಎಂಬವರನ್ನು ಸೆರೆಹಿಡಿದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಸದುರ್ಗ ಸಮುದ ಕಿನಾರೆ ಬಳಿ ಅಬಕಾರಿ ಸ್ಪೆಶಲ್ ಸ್ಕ್ವಾಡ್ನ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಅತುಲ್ ಟಿ.ವಿ, ಶಿಜಿತ್ ವಿ.ವಿ, ಶೈಲೇಶ್ ಕುಮಾರ್ ಪಿ, ಮಂಜುನಾಥನ್ ವಿ ಮತ್ತು ಮೋಹನ್ ಕುಮಾರ್ ಎಂ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಗಳ ಪೈಕಿ ಸುರೇಶ್ನ ವಿರುದ್ಧ ಇಂತಹ ಹಲವು ಪ್ರಕರಣಗಳಿವೆ ಎಂದೂ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಭಾರೀ ಪ್ರಮಾಣದ ಅಕ್ರಮ ಮದ್ಯ ಸಾಗಾಟ ನಡೆಯುತ್ತಿದ್ದು, ಆ ಬಗ್ಗೆ ಸದಾ ನಿಗಾ ಇರಿಸಲಾಗುತ್ತಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.







